
ತುಮಕೂರು : ಮಾದಕ ವಸ್ತುಗಳ ನಿಯಂತ್ರಣ ಇದೀಗ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಬೆಂಗಳೂರು ನಗರ ಮಾತ್ರವಲ್ಲ ಜಿಲ್ಲಾ ಮಟ್ಟದಲ್ಲೂ ಮಾದಕ ವಸ್ತುಗಳ ಮಾರಾಟ ಅನಿಯಂತ್ರಿತವಾಗಿ ನಡೆಯುತ್ತಿದೆ. ಅದರಲ್ಲೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಕಳೆದ 6 ವರ್ಷಗಳಲ್ಲಿ 158 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಡ್ರಗ್ ಸೇವನೆ ಹಾಗೂ ಮಾರಾಟ ಜಾಲ ಸಕ್ರಿಯವಾಗಿದೆ. ಅದರಲ್ಲೂ ಔಷಧಿ ಅಂಗಡಿಗಳಲ್ಲಿ ಕೆಲವೊಂದು ವೈದ್ಯಕೀಯ ಮಾತ್ರೆಗಳನ್ನು ಡ್ರಗ್ ರೂಪದಲ್ಲಿ ನೀಡಲಾಗುತ್ತಿದೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ಎಗ್ಗಿಲ್ಲದೆ ಇಂತಹ ದಂಧೆಗಳು ನಡೆಯುತ್ತಿದೆ. ಇದರ ವಿರುದ್ದ ಈಗಾಗಲೇ ತುಮಕೂರು ಜಿಲ್ಲಾ ಪೊಲೀಸರು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗಿದ್ದರೂ ತುಮಕೂರಿನಲ್ಲಿ ಕಳೆದ 6 ವರ್ಷಗಳಲ್ಲಿ ಈ ಸಂಬಂಧಿಸಿದಂತೆ 158 ಪ್ರಕರಣಗಳು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ಅಂಗಡಿ ಮಾಲೀಕರು ಹಾಗೂ ಆರೋಪಿಗಳ ವಿರುದ್ಧ ಎಫ್ಐಆರ್ ಮಾಡಲಾಗಿದೆ. ಅದರಲ್ಲೂ ತುಮಕೂರು ನಗರದಲ್ಲಿ ಮಾತ್ರೆಗಳನ್ನು ಮಾದಕ ವಸ್ತುಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತಾಗಿ ಎರಡು ಪ್ರಕರಣಗಳು ದಾಖಲಾಗಿವೆ. ಔಷಧ ಅಂಗಡಿ ಮಾಲೀಕರು ಹಾಗೂ ಆರೋಪಿಗಳ ವಿರುದ್ಧ ಎಫ್ಐಆರ್ ಮಾಡಲಾಗಿದ್ದು. ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಕಳೆದ 3 ವರ್ಷಗಳ ಅಂಕಿ-ಅಂಶಗಳಿಗೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 2000 ಪ್ರಕರಣಗಳು ಕಡಿಮೆಯಾಗಿರುವುದು ಕಂಡುಬರುತ್ತದೆ. ಸುಮಾರು 7000 ಭಾರತೀಯರು ಮತ್ತು 150 ವಿದೇಶಿಯರನ್ನು ಎನ್ ಡಿ ಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಿ ತನಿಖೆ ಕೈಗೊಂಡು ಪ್ರಕರಣದ ವಿಲೇವಾರಿಗೆ ಶ್ರಮಿಸಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಎನ್ ಡಿ ಪಿ ಎಸ್ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲು ಸಿಐಡಿ ಘಟಕದಲ್ಲಿ ಹೊಸದಾಗಿ ಆರಂಭಿಸಲಾಗಿದೆ. ಮಾದಕದ್ರವ್ಯ ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಸರಬರಾಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಸಿಐಡಿ ಘಟಕದಲ್ಲಿ ವಿಶೇಷ ತರಬೇತಿ ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 167 ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ.

ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ತರಬೇತಿ ಕಾರ್ಯಗಾರ ನಡೆಸಿ 2023ನೇ ಸಾಲಿನ ಡಿಸೆಂಬರ್ ಮಾಹೆಯಲ್ಲಿ 2409 ಶಾಲಾ ಕಾಲೇಜುಗಳಲ್ಲಿ ಒಟ್ಟು 3,95,253 ಹಾಗೂ 2024ನೇ ಸಾಲಿನ ಜೂನ್ ಮಾಹೆಯಲ್ಲಿ 3602 ಶಾಲಾ, ಕಾಲೇಜುಗಳಲ್ಲಿ 5.50 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಲಾಗಿದೆ.
ಇದಲ್ಲದೇ, ಜೂನ್ 26. 2024 ರಂದು ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ವಿರುದ್ಧ ಅಂತರ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸುಮಾರು 4,000 ಶಾಲಾ, ಕಾಲೇಜು ವಿಧ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರ ನಡೆಸಿ ತಿಳುವಳಿಕೆ ನೀಡಲಾಗಿದೆ. ಮಾದಕ ವಸ್ತು ಮುಕ್ತ ಕರ್ನಾಟಕ ಎಂದು ಆಪ್ ಅಭಿವೃದ್ಧಿಪಡಿಸಿ ಸಾರ್ವಜನಿಕರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಮಾದಕವಸ್ತು ಬಳಕೆ, ಸಂಗ್ರಹಣೆ ಸರಬರಾಜು ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ.
ಅಕ್ರಮ ಮಾದಕ ವ್ಯಸನವನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿಗಳಿಗೆ ಎನ್ ಸಿ ಬಿ ಆನ್ ಲೈನ್ ಕಾರ್ಯಕ್ರಮಗಳ ಮುಖಾಂತರ ತರಬೇತಿ ನೀಡಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.