
ದಕ್ಷಿಣ ಕನ್ನಡ : ಅಮೃತ ಭಾರತ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದುಕೊಂಡಿದೆ. 28.49 ಕೋಟಿ ರೂ. ವೆಚ್ಚದಲ್ಲಿ ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತಿದೆ.
ನವೀಕರಣ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿವೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸದರು ತಿಳಿಸಿದ್ದಾರೆ.

2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದಾಗಿ ಒಂದು ವರ್ಷ ಕಳೆದು ನಾಲ್ಕು ತಿಂಗಳಾಯಿತು. ಆದರೆ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದು ಮಂಗಳೂರು-ಬೆಂಗಳೂರು ರೈಲು ಮಾರ್ಗದ ಪ್ರಮುಖ ರೈಲು ನಿಲ್ದಾಣವೂ ಆಗಿದೆ.
28.49 ಕೋಟಿ ರೂ.ಗಳಲ್ಲಿ ಏನೇನು ನಡೆಯುತ್ತಿದೆ?
ರೈಲು ನಿಲ್ದಾಣದ ಕೆಲಸಗಳು ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಯಾಣಿಕರಿಗೆ ಈಗಿರುವ ಸೌಲಭ್ಯಗಳು ದುಪ್ಪಟ್ಟಾಗುತ್ತವೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್ಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಂದು ಕೆಫೆಟೀರಿಯಾ, ನಾಲ್ಕು ಕ್ಯಾಟರಿಂಗ್ ಸ್ಟಾಲ್ಗಳು ಇರಲಿದ್ದು, ಪ್ರತಿಯೊಂದು ಪ್ಲಾಟ್ ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೇಶನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು, ಇತರ ಭಾಗಕ್ಕೆ ಕಾಂಕ್ರೀಟ್ ಮತ್ತು ಟೈಲ್ಸ್ ಅಳವಡಿಕೆಯಾಗುತ್ತಿದೆ.
ಪ್ಲಾಟ್ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣವಾಗುತ್ತಿದೆ. ಇಡೀ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್.ಇ.ಡಿ. ಡಿಸ್ಪ್ಲೇ ಮೂಲಕ ರೈಲುಗಳು ಬಂದು ಹೋಗುವ ಕುರಿತ ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ್ಪ್ಲೇ ಬೋರ್ಡ್ ಅಳವಡಿಕೆ, ಸ್ಟೇಶನ್ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿವೆ. ಈಗಾಗಲೇ ರೈಲು ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್ ರೈಲು ಓಡಾಟ ಆರಂಭಗೊಂಡರೆ ನಿಲ್ದಾಣದಲ್ಲಿ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ.

ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯ ಕಳೆದ ಡಿಸೆಂಬರ್ವರೆಗೆ ಪ್ಯಾಸೆಂಜರ್ ರೈಲಿನಂತಿತ್ತು. ಈಗ ಸೂಪರ್ ಫಾಸ್ಟ್ ರೈಲಿನಂತಾಗಿದೆ. ಕಾಮಗಾರಿ ದಿಢೀರನೆ ಇಷ್ಟೊಂದು ಕ್ಷಿಪ್ರಗತಿಯಲ್ಲಿ ನಡೆಯುವ ಸಂದರ್ಭ, ಗುಣಮಟ್ಟವನ್ನು ಖಾತ್ರಿಯಾಗಿಟ್ಟುಕೊಳ್ಳುತ್ತಾರೆಯೇ ಎಂಬ ಅನುಮಾನ ಸ್ಥಳೀಯರಿಗಿದೆ. ಈ ಕುರಿತು ಕಾಮಗಾರಿ ಮಾಡುತ್ತಿರುವ ಸಿವಿಲ್ ಎಂಜಿನಿಯರ್ಗಳನ್ನು ಸಂಪರ್ಕಿಸಿದಾಗ, ನಾವು ಮಾಡುವ ಕೆಲಸದ ಕುರಿತು ಕಣ್ಗಾವಲು ಏಜನ್ಸಿ ಗಮನಿಸುತ್ತದೆ ಎಂದಿದ್ದಾರೆ.
ಬಂಟ್ವಾಳ ಸಹಿತ ಅಮೃತ ಭಾರತ ಯೋಜನೆಯಡಿ ಕಾಮಗಾರಿ ಆರಂಭಗೊಂಡ ರೈಲು ನಿಲ್ದಾಣಗಳ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಮುಗಿಸುವ ಭರವಸೆ ಇದೆ ಎಂದಿದ್ದಾರೆ ಕ್ಯಾ. ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ.