
ಮಂಡ್ಯ : ಕೆಆರ್ಎಸ್ ಜಲಾಶಯದ ಸುತ್ತಲಿನ 20 ಕಿ.ಮೀ. ಪರಿಧಿಯಲ್ಲಿ ಕಲ್ಲುಗಣಿಗಾರಿಕೆ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಎಷ್ಟು ಸಮಯ ಬೇಕು ಎಂಬ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೆಆರ್ಎಸ್ ಜಲಾಶಯದ ಸುತ್ತಲಿನ ಕಲ್ಲುಗಣಿಗಾರಿಕೆ ಸ್ಫೋಟದ ಪರಿಣಾಮಗಳ ಅಧ್ಯಯನಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಧ್ಯಯನಕ್ಕೆ ಬೇಕಾಗುವ ಸಮಯದ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ನ್ಯಾಯಾಲಯವು ಗಣಿಗಾರಿಕೆ ನಿಷೇಧಿಸಿ, ಆರು ತಿಂಗಳಲ್ಲಿ ಅಧ್ಯಯನ ನಡೆಸಲು ನಿರ್ದೇಶಿಸಿತ್ತು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸಿ.ಜಿ.ಕುಮಾರ್ ಮತ್ತಿತರರು ಸಲ್ಲಿಸಿರುವ ಅರ್ಜಿಯು ಹಂಗಾಮಿ ಸಿಜೆ ವಿ.ಎಂ.ಕಾಮೇಶ್ವರರಾವ್ ಮತ್ತು ನ್ಯಾ.ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅರ್ಜಿದಾರರ ಪರ ವಕೀಲರು, ”2024ರ ಜನವರಿಯಂದು ನ್ಯಾಯಾಲಯ ಜಲಾಶಯದ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ಸ್ಫೋಟದಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ನಿರ್ದೇಶನ ನೀಡಿದ್ದರೂ ಈವರೆಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ” ಎಂದರು.
ವಿಚಾರಣೆ ಮುಂದೂಡಿಕೆ ಆಗ ಸರಕಾರಿ ವಕೀಲರು ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಲು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಾಲಯ ನೀವು ಐಐಎಸ್ಸಿಯಿಂದ ಅಧ್ಯಯನಕ್ಕೆ ಎಷ್ಟು ಸಮಯ ಬೇಕಾಗುತ್ತದೆ? ಯಾವ ಸಮಯ ಒಳ್ಳೆಯದು ಎಂಬ ಬಗ್ಗೆ ಮಾಹಿತಿ ಪಡೆದು ಸಲ್ಲಿಸಬೇಕು ಎಂದು ಮೌಖಿಕವಾಗಿ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಅಲ್ಲದೆ ಸರಕಾರಕ್ಕೆ ವರದಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿದ ನ್ಯಾಯಪೀಠ ಜಲಾಶಯದ ಸುತ್ತ ಕಲ್ಲುಗಣಿಗಾರಿಕೆ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಐಐಎಸ್ಸಿಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬ ಬಗ್ಗೆ ಮಾಹಿತಿ ಪಡೆದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಗಣಿಗಾರಿಕೆಗೆ ನಿಷೇಧ ಕೃಷ್ಣರಾಜ ಸಾಗರದ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಲ್ಲುಗಣಿಗಾರಿಕೆ ಮತ್ತು ಕ್ವಾರಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನಿಷೇಧ ವಿಧಿಸಿತ್ತು. ಜತೆಗೆ ಕೆಆರ್ಎಸ್ ಕೇವಲ ಜಲಾಶಯವಲ್ಲ, ಅದರ ಜತೆ ರಾಜ್ಯದ ಪಾರಂಪರಿಕ ಹಾಗೂ ಐತಿಹಾಸಿಕ ಮೌಲ್ಯಗಳಿವೆ. ಅದನ್ನು ದೇಶದ ಅಪ್ರತಿಮ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿದ್ದಾರೆ. ರಾಜ್ಯದ ಜನರು ಬೆವರು ಮತ್ತು ರಕ್ತ ಹರಿಸಿ ಜಲಾಶಯ ನಿರ್ಮಿಸಿದ್ದಾರೆ. ಇದು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಕಾಣ್ಕೆಯಾಗಿದೆ. ಅಂತಹ ಅಣೆಕಟ್ಟೆಯ ಭವಿಷ್ಯದ ದೃಷ್ಟಿಯಿಂದ ಗಣಿಗಾರಿಕೆ ನಿಷೇಧ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನ್ಯಾಯಾಲಯ 2024ರ ಜನವರಿ 9 ರಂದು ಆದೇಶ ನೀಡಿತ್ತು.
6 ತಿಂಗಳಲ್ಲಿ ಅಧ್ಯಯನಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು ಅಲ್ಲದೆ, ಆರು ತಿಂಗಳಲ್ಲಿ ಸರಕಾರ ಗಣಿಗಾರಿಕೆಯಿಂದ ಜಲಾಶಯಕ್ಕಾಗಲಿರುವ ಅಪಾಯದ ಬಗ್ಗೆ ಅಧ್ಯಯ ನಡೆಸುವಂತೆಯೂ ನ್ಯಾಯಪೀಠ ಸರಕಾರಕ್ಕೆ ನಿರ್ದೇಶನ ನೀಡಿತ್ತು. ನಂತರ ಅರ್ಜಿದಾರರ ಪರ ವಕೀಲರು, ವೈಜ್ಞಾನಿಕ ಅಧ್ಯಯನ ಆಗುವವರೆಗೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಆ ಮನವಿಯನ್ನು ನ್ಯಾಯಾಲಯ ಸರಾಸಗಟಾಗಿ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.