
ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ತೆಗೆದುಕೊಂಡ ದುಡುಕಿನ ನಿರ್ಧಾರದಿಂದ ಮೂವರ ದಾರುಣ ಸಾವು ಸಂಭವಿಸಿದೆ. ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಜೊತೆ ತಾಯಿ ಸಾವಿಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ರಂಗಧಾಮ ಕೆರೆಯಲ್ಲಿ ನಡೆದಿದೆ. ಬಾಧಗನಹಳ್ಳಿಯ ನಿವಾಸಿಗಳಾದ ಲಾವಣ್ಯ (30), ಅವರ ಮಕ್ಕಳಾದ ನಿಹಾರಿಕಾ (09) ಮತ್ತು ನೇಹಾ (06) ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

j3tvkannada
ಮೃತ ಲಾವಣ್ಯ ಬಾಧಗನಹಳ್ಳಿಯ ಜಯಣ್ಣ ಎಂಬವರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಜಯಣ್ಣ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಶಾಲೆಗೆ ದಾಖಲಾತಿ ಮಾಡಿಸಲು ಗಂಡ, ಹೆಂಡತಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ, ಕೆಲಸದ ನಿಮಿತ್ತ ಗಂಡ ಜಯಣ್ಣ, ಮಕ್ಕಳ ದಾಖಲಾತಿ ಮಾಡಿಸು, ಶಾಲಾ ಶುಲ್ಕವನ್ನು ಸೋಮವಾರ ಕಟ್ಟೋಣ ಎಂದು ಹೆಂಡತಿಗೆ ಹೇಳಿ ಅಲ್ಲಿಂದ ಹೋಗಿದ್ದಾರೆ. ಆದರೆ, ಲಾವಣ್ಯ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಿದ್ದಾರೆ. ಜಯಣ್ಣ ತೋಟದ ಕೆಲಸಕ್ಕೆ ಹೋಗಿ, ಸಂಜೆ ಮನೆಗೆ ಬಂದು ಹೆಂಡತಿ, ಮಕ್ಕಳು ಕಾಣಿಸದಿದ್ದಾಗ ಕರೆ ಮಾಡಿದ್ದಾರೆ. ಆದರೆ ಮಹಿಳೆಯ ಪೋನ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಹುಡುಕಾಟ ನಡೆಸಿದಾಗ ರಂಗಧಾಮ ಕೆರೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರಕ್ಕೆ ನಡೆದ ಜಗಳವೇ ಆತ್ಮಹತ್ಯೆಗೆ ಕಾರಣ ಎಂಬ ಸಂಶಯ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.