
ರಾಮನಗರ : ನಮ್ಮ ಪಾಲಿನ ನೀರನ್ನು ನಾವು ಪಡೆದೆ ತೀರುತ್ತೇವೆ. ಕಾವೇರಿ ಟ್ರಿಬ್ಯೂನಲ್ ಇರುವ ರೀತಿಯಲ್ಲೇ ಹೇಮಾವತಿ ಟ್ರಿಬ್ಯೂನಲ್ ರಚನೆ ಮಾಡಿ ನಮ್ಮ ಪಾಲಿನ ನೀರನ್ನು ಬಿಡುವ ಕೆಲಸ ಮಾಡಬೇಕು. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿ ಅಧಿಕಾರಿಗಳ ಮುಖಾಂತರ ಹೇಮಾವತಿ ಡ್ಯಾಂಗೆ ಎಷ್ಟು ನೀರು ಸಂಗ್ರಹಣೆಯಾಗಿದೆ. ಎಷ್ಟು ನೀರಿನ ಪಾಲನ್ನು ಬಿಡುಗಡೆ ಮಾಡಿದ್ದೇವೆ ಎಂಬುದನ್ನು ಸರ್ಕಾರವೇ ತಿಳಿಸುವ ಕೆಲಸ ಆಗಬೇಕು. ಇಲ್ಲವಾದರೆ ಪ್ರತಿಭಟನೆ ಉಗ್ರ ಸ್ವರೂಪ ತಾಳುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಎಚ್ಚರಿಕೆ ನೀಡಿದರು.
ನಮ್ಮ ನೀರು ನಮ್ಮ ಹಕ್ಕು ಹೇಮಾವತಿ ಯೋಜನೆಗಾಗಿ ವಿವಿಧ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ಸೇರಿ ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ತುಮಕೂರು ಜನಪ್ರತಿನಿಧಿಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು. ನಮಗೆ ಮಂಜೂರು ಆಗಿರುವ ಮುಕ್ಕಾಲು ಟಿಎಂಸಿ ನೀರನ್ನು ನಾವು ಕೇಳುತ್ತಿದ್ದೇವೆ. ನಮ್ಮ ಪಾಲಿನ ನೀರನ್ನು ಬಿಟ್ಟು ತುಮಕೂರಿಗೆ ಸಿಗಬೇಕಾದ ನೀರಿನ ಒಂದು ಹನಿ ನೀರನ್ನು ಕೇಳುತ್ತಿಲ್ಲ. ಪ್ರಾಣ ಕೊಟ್ಟಾದರೂ ಹೇಮಾವತಿ ನೀರನ್ನು ಪಡೆದೆ ತೀರುತ್ತವೆ.

ನಮ್ಮ ಪಾಲಿನ ಹಕ್ಕನ್ನು ತುಮಕೂರಿನ ಜನಪ್ರತಿನಿಧಿಗಳು ತಡೆಯಲು ಸಾಧ್ಯವೇ ಇಲ್ಲ, ನಾವೇಕೆ ಅವರನ್ನು ಹೋರಾಟದಲ್ಲಿ ಹಿರೋ ಮಾಡಬೇಕು. ನಮ್ಮ ಪಾಲಿನ ನೀರನ್ನು ಕೊಡಲ್ಲ ಎಂದು ಗಾಂಡುಗಳು ಹೇಳುತ್ತಿದ್ದಾರೆ. ಅವರ ಮಾತಿಗೆ ಗೌರವ ಕೊಡುತ್ತೀರಾ ಎಂದು ತುಮಕೂರು ಹೇಮಾವತಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದರು. ಬಿಜೆಪಿ ವಿಜಯೇಂದ್ರ ಮೆಚ್ಯೂರಿಟಿ ಇಲ್ಲದ ನಾಯಕರಾಗಿದ್ದು, ಕಳೆದ ಸಂಸತ್ ಚುನಾವಣೆಯಲ್ಲಿ ಮಾಗಡಿ ತಾಲೂಕಿನ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾರೆ.
ಈಗ ತುಮಕೂರಿಗೆ ಹೋಗಿ ಅಲ್ಲಿನ ನಾಯಕರನ್ನು ಮೆಚ್ಚಿಸಲು ಮಾಗಡಿ ತಾಲೂಕಿಗೆ ನೀರು ಕೊಡಲ್ಲ ಎಂದು ಹೇಳಿಕೆ ಕೊಡುತ್ತಾರೆ, ಅವರಿಗೆ ನಾಚಿಕೆಯಾಗಬೇಕು. ಹೇಮಾವತಿ ನೀರು ಮಾಗಡಿಗೂ ಬರಬೇಕು. ಇಲ್ಲಿ ನಿಮಗೆ ಮತ ಕೊಟ್ಟ ಜನಗಳಿಗೆ ಏನು ಉತ್ತರ ಕೊಡುತ್ತೀರಾ, ಸಿ.ಟಿ. ರವಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಲ್ಲಿನ ಜನ ಅವನ ನಾಲಿಗೆಗೆ ಬರೇ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ತಾಲೂಕಿಗೆ ಇಬ್ಬರು ನಾಯಕರು ಬಂದು ಇಲ್ಲಿನ ಜನಗಳಿಗೆ ಹೇಮಾವತಿ ನೀರು ಬರುತ್ತದೆ ಎಂಬ ಭರವಸೆ ಕೊಡಬೇಕು. ಇಲ್ಲವಾದರೆ ಬಿಜೆಪಿಗೆ ಮತ ಹಾಕಿಸಲು ತಾಲೂಕಿನಲ್ಲಿ ಬಿಡುವುದಿಲ್ಲ ಎಂದು ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಮಾಜಿ ಸಿಎಂ ಬೆಂಬಲಿಸುತ್ತಿಲ್ಲ: ರಾಮನಗರ, ಮಾಗಡಿ ನನಗೆ ಎರಡು ಕಣ್ಣು ಎಂದು ಹೇಳುತ್ತಿದ್ದ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ರವರು ಮಾಗಡಿಗೆ ಹೇಮಾವತಿ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರು ಒಂದು ಹೇಳಿಕೆಯನ್ನು ಕೊಟ್ಟಿಲ್ಲ. ನಿನ್ನೆ ಬೆಂಗಳೂರಿನಲ್ಲಿ ಆರ್ಸಿಬಿ ಸಂಭ್ರಮಾಚರಣೆ ವೇಳೆ 11 ಜನ ಅಭಿಮಾನಿಗಳು ಸತ್ತ ಹಿನ್ನೆಲೆಯಲ್ಲಿ ತಕ್ಷಣವೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಈ ಸಾವಿಗೆ ಹೊಣೆ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡುತ್ತಾರೆ. ಇಲ್ಲಿ ನಮ್ಮ ವಿರುದ್ಧ ತುಮಕೂರಿನಲ್ಲಿ ಹೋರಾಟ ಮಾಡುತ್ತಿದ್ದರು. ಮಾಗಡಿ ಪರವಾಗಿ ಎಚ್.ಡಿ.ಕುಮಾರಸ್ವಾಮಿ ರವರು ಹೇಳಿಕೆ ಕೊಡುತ್ತಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ರಸ್ತೆ ತಡೆ ಪ್ರತಿಭಟನೆ ಪಾದಯಾತ್ರೆಯಾಗಿ ಬದಲಾವಣೆಯಾಗಿತ್ತು. ಇದರಿಂದ ಪೊಲೀಸರು ಗಲಿಬಿಲಿಗೆ ಒಳಗಾದರೂ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ಕೇವಲ ಹತ್ತು ನಿಮಿಷದಲ್ಲಿ ಮುಗಿಸುವಂತೆ ಜನಪ್ರತಿನಿಧಿಗಳನ್ನು ಕೇಳಿಕೊಂಡಿದ್ದರು. ಶಾಸಕ ಬಾಲಕೃಷ್ಣರವರು ರಸ್ತೆಯಲ್ಲಿ ವಾಹನ ಓಡಾಡಲು ಪೊಲೀಸರೇ ಬಿಟ್ಟಿದ್ದಾರೆ. ರಸ್ತೆ ತಡೆ ನಡೆಸಿದರು ವಾಹನಗಳು ನಿಲ್ಲುತ್ತಿಲ್ಲ. ಇದರಿಂದ ನಮಗೆ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ ಎಂದು ಮರೂರು ಹ್ಯಾಂಡ್ ಪೋಸ್ಟ್ ಬಳಿ ರಸ್ತೆ ತಡೆಯಲು ಮುಂದಾಗಿದ್ದ ಬಾಲಕೃಷ್ಣ ಅವರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಯಲ್ಲೇ ತಾಳೆಕೆರೆ ಹ್ಯಾಂಡ್ ಪೋಸ್ಟ್ವರೆಗೂ ಪಾದಯಾತ್ರೆ ಮಾಡುತ್ತೇವೆ ಎಂದು ರಸ್ತೆಯಲ್ಲಿ ಧಿಕ್ಕಾರ ಕೂಗುತ್ತಾ ಮುಂದೆ ಸಾಗಿದರು.
ಇದರಿಂದ ಗಲಿಬಿಲಿಗೆ ಒಳಗಾದ ಪೊಲೀಸರು ಏನು ಮಾಡಬೇಕು ಎಂಬುದೇ ತಿಳಿಯದೆ ಡಿವೈಎಸ್ಪಿ ಪ್ರವೀಣ್ ಹಾಗೂ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಹಾಗೂ ರೈತರನ್ನು ಮಾತಿನಲ್ಲಿ ಮನವೊಲಿಸುವ ಕೆಲಸವನ್ನು ಮಾಡಿದರು. ಆದರೆ ಪ್ರತಿಭಟನಾಕಾರರು ಪೊಲೀಸರ ಮಾತಿಗೆ ಜಗ್ಗದೆ ಪಾದಯಾತ್ರೆ ಮೂಲಕವೇ ಪ್ರತಿಭಟನೆಯನ್ನು ಮುಂದುವರಿಸಿದ್ದರು. ಪೊಲೀಸರು ಪ್ರತಿಭಟನೆಕಾರರನ್ನು ಬಂಧಿಸಿ ವ್ಯಾನ್ ಮೂಲಕ ಕುದೂರು ಠಾಣೆಗೆ ಕರೆ ತಂದರು ಕೆಲಹೊತ್ತಿನ ನಂತರ ಬಿಡುಗಡೆ ಮಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಹೇಮಾವತಿ ಯೋಜನೆ ಈ ಹಿಂದೆಯೇ ಹೋರಾಟದ ಮೂಲಕವೇ ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳುವ ಕೆಲಸ ಮಾಡಲಾಗಿದೆ.
ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀರಾವರಿ ಹೇಮಾವತಿ ವಿಚಾರವಾಗಿ ನಮ್ಮ ಪಾಲಿನ ನೀರು ಸಿಗುವ ಹಿನ್ನೆಲೆಯಲ್ಲಿ ಹೋರಾಟಗರಾದ ಟಿ.ಎ.ರಂಗಯ್ಯ, ಮಾದೇಗೌಡ, ಮಾಜಿ ಸಚಿವರಾದ ವೈ.ಕೆ.ರಾಮಯ್ಯ ರವರ ಸಮ್ಮುಖದಲ್ಲಿ ಸಭೆ ನಡೆದು ನಮ್ಮ ಪಾಲಿನ ನೀರು ಮಂಜೂರಾತಿಯಾಗಿದೆ. ಈಗ ನೀರು ಬಿಡುವುದಿಲ್ಲ ಎಂದು ತುಮಕೂರಿನವರು ಹೇಳಲು ಬರುವುದಿಲ್ಲ ತುಮಕೂರಿಗೆ ನೀರು ಬರದಂತೆ ಹೊಳೆನರಸಿಪುರದವರು ಪ್ರತಿಭಟನೆ ಮಾಡಿದರೆ ತುಮಕೂರಿನವರ ಪರಿಸ್ಥಿತಿ ಏನಾಗುತ್ತದೆ ಈ ರೀತಿ ಮೇಲ್ಭಾಗದಿಂದ ಬರುವ ನೀರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಪಡೆಯಬೇಕು ಆದರೆ ಮಾಗಡಿಯವರಿಗೆ ಹೋರಾಟದ ಗಂಧ,ಗಾಳಿ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೇಮಾವತಿ ನೀರು ಸಿಗುವವರೆಗೂ ಪ್ರತಿಭಟನೆ ಹೋರಾಟ ನಿರಂತರವಾಗಿ ಇರಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ತಾಲೂಕು ಅಧ್ಯಕ್ಷರಾದ ಹೊಸಪಾಳ್ಯ ಲೋಕೇಶ್, ಗೋವಿಂದರಾಜು ಸಭೆಯಲ್ಲಿ ತಿಳಿಸಿದರು. ಪ್ರತಿಭಟನೆಯಲ್ಲಿ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್, ಮುಖಂಡರಾದ ಕಲ್ಕೆರೆ ಶಿವಣ್ಣ, ಶಶಾಂಕ್ ರೇವಣ್ಣ, ಎಂ.ಕೆ.ಧನಂಜಯ್ಯ, ಜೆ.ಪಿ. ಚಂದ್ರೇಗೌಡ, ಶಿವರಾಜು, ಆಗ್ರೋ ಪುರುಷೋತ್ತಮ್, ವನಜ, ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ಚಂದ್ರಶೇಖರ್, ತಟವಾಳ್ ನಾಗರಾಜು, ಕುಮಾರ್ ಹೊಂಬಾಳಮ್ಮನಪೇಟೆ ರವಿಕುಮಾರ್, ರಾಮು, ವಿನಯ್, ಪತ್ರಕರ್ತ ಸಂಘದ ಅಧ್ಯಕ್ಷ ರಾಮು ಭಾಗವಹಿಸಿದ್ದರು.