
ಚಾಮರಾಜನಗರ: ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕೂಡ ಒಂದಾಗಿದೆ. ಹಲವು ವನ್ಯಜೀವಿಗಳ ತಾಣವಾಗಿದೆ. ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂಡೀಪುರ ರಸ್ತೆಗಳಲ್ಲಿ ಓಡಾಡುವವರಿಗೆ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣಾ ಇಲಾಖೆ ಕೆಲವು ನಿರ್ಬಂಧಗಳನ್ನು ಹೇರಿದೆ. ಕೆಲವು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಾರು, ಬೈಕ್ ಅಥವಾ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ. ಬಂಡೀಪುರಕ್ಕೆ ಅಕ್ರಮ ಪ್ರವೇಶ ಮಾಡಿದರೆ ಅದು ಅಪರಾಧವಾಗಲಿದೆ. ನಿಯಮ ಗೊತ್ತಿದ್ದರೂ ಕೆಲವರು ಹುಚ್ಚಾಟ ಮೆರೆಯುತ್ತಾರೆ. ಕಾರು ನಿಲ್ಲಿಸಿ ಫೋಟೋಶೂಟ್ ಮಾಡ್ತಿದ್ದ ಜೋಡಿಗೆ ಅಲ್ಲಿನ ಅಧಿಕಾರಿಗಳು ದಂಡ ಹಾಕಿದ್ದಾರೆ.

j3tvkannada
ಬಂಡೀಪುರಕ್ಕೆ ಅಕ್ರಮ ಪ್ರವೇಶ ಮಾಡಿ ಎಲ್ಲೆಂದರಲ್ಲಿ ಕಾರು ನಿಲ್ಲಿಸಿ ಫೋಟೋಶೂಟ್ ಮಾಡುತ್ತಿದ್ದ ಜೋಡಿಗೆ ಇಲಾಖೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬಂಡೀಪುರದ ಮಂಗಲದ ಬಳಿ ಅತಿಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ಈ ಜೋಡಿ, ರೂಲ್ಸ್ ಅನ್ನು ಲೆಕ್ಕಿಸದೇ ಪೋಟೋಶೂಟ್ ಮಾಡುತ್ತಿದ್ದರು. ಈ ವಿಚಾರವನ್ನು ಸ್ಥಳೀಯರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರು ಅರಣ್ಯದ ಒಳಗೆ ಫೋಟೋಶೂಟ್ ಮಾಡಿಸುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಇಬ್ಬರಿಗೂ 24 ಸಾವಿರ ದಂಡ ವಿಧಿಸಿದ್ದಾರೆ.
ಇಬ್ಬರನ್ನೂ ಕಚೇರಿಗೆ ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡ ಅರಣ್ಯಾಧಿಕಾರಿಗಳು, 24 ಸಾವಿರ ದಂಡ ವಿಧಿಸಿ ಮತ್ತೊಮ್ಮೆ ಕಾಡಿಗೆ ಅತಿಕ್ರಮ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಕಾಡು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಹಿಡಿದು ಫೋಟೋ ಹಾಗೂ ರೀಲ್ಸ್ ಹುಚ್ಚಾಟ ಮಾಡೋದನ್ನು ಜನರು ಮೊದಲು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.