
ಹಾವೇರಿ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡು 5 ವರ್ಷವಾಗಿದ್ದು, ಸರಕಾರ ಶೀಘ್ರದಲ್ಲಿ ಚುನಾವಣೆ ನಡೆಸುವ ಮಾತು ಕೇಳಿ ಬರುತ್ತಿದೆ. ಇದರಿಂದ ಟಿಕೆಟ್ ಆಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

j3tvkannada
ಅಧಿಕಾರ ವಿಕೇಂದ್ರೀಕರಣದ ಬಳಿಕ ಜಿ.ಪಂ, ತಾ.ಪಂಗಳು ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಜಿ.ಪಂ ಸದಸ್ಯರಿದ್ದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಅಧ್ಯಕ್ಷರು ಮತ್ತು ಜಿ.ಪಂ ಸಿ.ಇ.ಒ ಗಮನಕ್ಕೆ ತಂದು ಅನುದಾನ ಪಡೆದುಕೊಳ್ಳುತ್ತಾರೆ. ಅಲ್ಲದೇ ಜಿ.ಪಂ ಸಾಮಾನ್ಯ ಸಭೆಗಳಲ್ಲಿ ಪ್ರಮುಖ ಸಮಸ್ಯೆಗಳ ಬಗ್ಗೆ ಸದಸ್ಯರು ಧ್ವನಿ ಎತ್ತುವುದರಿಂದ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಮಂಜೂರು ಮಾಡಲು ಅನುಕೂಲವಾಗುತ್ತದೆ. ಆದರೆ ಜಿ.ಪಂ ಆಡಳಿತ ಮಂಡಳಿಯೇ ಇಲ್ಲದ ಕಾರಣ ಅಧಿಕಾರಿಗಳೇ ನೇರವಾಗಿ ಕಾಮಗಾರಿಗಳನ್ನು ಮಂಜೂರು ಮಾಡುತ್ತಾರೆ. ಆದರೆ ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಲು ಸದಸ್ಯರೇ ಇಲ್ಲದ ಕಾರಣ ಕೆಲವು ಗಂಭೀರ ಸಮಸ್ಯೆ ಇರುವ ಕಾಮಗಾರಿಗಳಿಗೂ ಅನುದಾನ ಲಭ್ಯವಾಗುತ್ತಿಲ್ಲ ಎಂದು ಜಿ.ಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಆರೋಪಿಸಿದರು.
ಸರಕಾರದ ಮೇಲೆ ಒತ್ತಡ:-
ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿ ನಿರ್ಣಯಿಸುವಲ್ಲಿ ಗೊಂದಲವಾಗುತ್ತಿರುವುದು ರಾಜ್ಯಾದ್ಯಂತ ಚುನಾವಣೆ ಘೋಷಣೆಗೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇನ್ನು ಚುನಾವಣೆ ನಡೆಸುವ ಬಗ್ಗೆ ಪ್ರಮುಖ ಪಕ್ಷಗಳ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿಗಳು ತಮ್ಮ ವ್ಯಾಪ್ತಿಯ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ.
ಇನ್ನು, ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿ ಇಲ್ಲದ ಕಾರಣ ಆಯಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಪಂ ಸದಸ್ಯರ ಅನುದಾನ ಸಹ ಶಾಸಕರ ಅಡಿಯಲ್ಲೇ ಬಿಡುಗಡೆಯಾಗುತ್ತಿದೆ, ಇದರಿಂದ ಶಾಸಕರಿಗೂ ಚುನಾವಣೆ ನಡೆಯುವ ಬಗ್ಗೆ ಆಸಕ್ತಿ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ನ್ಯಾಯಾಲಯದ ತರಾಟೆ ಹಾಗೂ ಇನ್ನೊಂದೆಡೆ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಸರಕಾರ ಶೀಘ್ರದಲ್ಲಿ ಚುನಾವಣೆ ನಡೆಸುವ ಮಾತು ಕೇಳಿ ಬರುತ್ತಿದೆ.
ತೆರೆ ಮರೆ ಕಸರತ್ತು:-
ಚುನಾವಣೆ ಘೋಷಣೆ ಮಾತು ಕೇಳಿ ಬರುತ್ತಿದ್ದಂತೆ ಹಲವಾರು ಜಿ.ಪಂ ಮಾಜಿ ಸದಸ್ಯರು, ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಹಲವು ಹೊಸಬರು ಟಿಕೆಟ್ಗಾಗಿ ಫೈಟ್ ನಡೆಸಿದ್ದಾರೆ. ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳು ಜಿಲ್ಲೆಯ ಎಲ್ಲಾ ಶಾಸಕರು, ಸಚಿವರ ಬಳಿ ಟಿಕೆಟ್ಗಾಗಿ ಪ್ರಭಾವ ಬಳಸುವ ಪ್ರಯತ್ನ ನಡೆಸಿದ್ದರೆ ಬಿ.ಜೆ.ಪಿಯ ಆಕಾಂಕ್ಷಿಗಳು ಮಾಜಿ ಶಾಸಕರು, ಸಂಸದರು, ಮಾಜಿ ಸಚಿವರು, ಪಕ್ಷದ ಅನೇಕ ರಾಜ್ಯ ಮಟ್ಟದ ಮುಖಂಡರ ಬಳಿಗೂ ಬೇಡಿಕೆ ಇಡುತ್ತಿದ್ದಾರೆ.