
ಬಾಗಲಕೋಟೆ: ಕುಡಿಯುವ ನೀರಿಗೆ ಹಾಹಾಕಾರವುಂಟಾಗಿ ಕೃಷ್ಣಾ ನದಿಗೆ ನೀರು ಬಿಡಿ ಎಂದು ಪಕ್ಕದ ಮಹಾರಾಷ್ಟ್ರಕ್ಕೆ ಗೋಗರೆದರೂ ನೀರು ಬಿಡಲಿಲ್ಲ, ಇದೀಗ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿದಿದ್ದರಿಂದ ನದಿಗೆ ನೀರು ಹರಿದು ಬರುತ್ತಿದೆ. ಕೇವಲ 20 ದಿನಗಳ ಹಿಂದೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಕೃಷ್ಣಾ ನದಿ ಪಾತ್ರದಲ್ಲಿ ನೀರಿನ ಕೊರತೆಯಿತ್ತು. ನೆರೆ ರಾಜ್ಯ ಮಾತ್ರ ಮೊಂಡುತನದಿಂದ ವರ್ತಿಸಿ ನೀರು ಕೊಡಲಿಲ್ಲ.
ಪಶ್ಚಿಮ ಘಟ್ಟದಲ್ಲಿ ಅಪಾರ ಮಳೆ ಸುರಿಯುತ್ತಿರುವ ಕಾರಣ ನದಿಗೆ ನೈಸರ್ಗಿಕವಾಗಿ ನೀರು ಹರಿಯುತ್ತಿದೆ. ಮಹಾರಾಷ್ಟ್ರದ ಕೃಷ್ಣಾನದಿ ಉಗಮ ಸ್ಥಾನ ಮಹಾಬಳೇಶ್ವರ, ವಾರಣಾ ಮತ್ತು ಕೊಯ್ತಾ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದೆ. ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ರಾಜಾಪೂರ ಬ್ಯಾರೇಜ್ನಿಂದ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ಗೆ ನೀರು ಹರಿಯುತ್ತಿದೆ.

j3tvkannada
ವಾರದ ಹಿಂದೆ 1 ಸಾವಿರ ಕ್ಯುಸೆಕ್ ನಷ್ಟಿದ್ದ ಒಳಹರಿವು ಈಗ 33 ಸಾವಿರ ಕ್ಯುಸೆಕ್ಗೆ ಏರಿಕೆಯಾಗಿದೆ. ಹಿಪ್ಪರಗಿ ಬ್ಯಾರೇಜ್, ವಿಜಯಪುರದ ಆಲಮಟ್ಟಿ ಡ್ಯಾಂಗೆ ನೀರು ಸಂಗ್ರಹಣೆಗೆ ಅನುಕೂಲವಾಗಲಿದೆ. ಸದ್ಯ ಹಿಪ್ಪರಗಿ ಬ್ಯಾರೇಜ್ನಿಂದ 33 ಸಾವಿರ ಕ್ಯುಸೆಕ್ ನೀರು ಆಲಮಟ್ಟಿ ಡ್ಯಾಂಗೆ ಹೊರ ಬಿಡಲಾಗುತ್ತಿದೆ. ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕುಗಳಲ್ಲಿ ಒಂದೂವರೆ ತಿಂಗಳ ಹಿಂದೆ ಕುಡಿವ ನೀರಿಗೆ ಹಾಹಾಕಾರವಿತ್ತು.
ಆಗ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶಾಸಕರು ಮತ್ತು ಸಚಿವರು ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವಿಸ್ಗೆ ಪತ್ರ ಬರೆದಿದ್ದರು. ಕೃಷ್ಣಾ ನದಿಗೆ ಕೊಯ್ಕಾ ಡ್ಯಾಂನಿಂದ 2 ಟಿಎಂಸಿ ನೀರು ಹರಿಸಬೇಕು ಎಂದು ಕೇಳಿದ್ದರು. ಸಿಎಂ ಪತ್ರಕ್ಕೆ ಮಹಾರಾಷ್ಟ್ರ ಸರಕಾರದಿಂದ ಉತ್ತರ ಬರಲಿಲ್ಲ ನೀರೂ ಬಿಡಲಿಲ್ಲ.
ಪ್ರತಿ ವರ್ಷ ಬೇಸಿಗೆಯಲ್ಲಿ 4 ಟಿಎಂಸಿ ನೀರು ಬಿಡಬೇಕು ಎಂಬ ಷರತ್ತು ಪಕ್ಕದ ರಾಜ್ಯ ಪಾಲಿಸಲಿಲ್ಲ. ಇದೀಗ ಮಹಾರಾಷ್ಟ್ರದಿಂದ ನೈಸರ್ಗಿಕವಾಗಿ ನೀರು ಹರಿದುಬರುತ್ತಿದೆ. ವರ್ಷಧಾರೆ ಮುಂದುವರಿದರೆ ಮಹಾರಾಷ್ಟ್ರ ಅಪಾರ ಪ್ರಮಾಣದ ನೀರು ತನ್ನ ಡ್ಯಾಂಗಳ ಮೂಲಕ ಹೊರಹಾಕಲಿದೆ. ನೀರಿನ ಪ್ರಮಾಣ 4 ಲಕ್ಷ ಕ್ಯುಸೆಕ್ ದಾಟಿದರೆ ಜಿಲ್ಲೆಯಲ್ಲಿ ನೆರೆ ಎದುರಾಗುವ ಸಾಧ್ಯತೆಯಿದೆ. ನೆರೆ ರಾಜ್ಯ ದಶಕಗಳಿಂದ ಬೇಸಿಗೆ ಅವಧಿಯಲ್ಲಿ ನೀರಿನ ವಿಷಯವಾಗಿ ಮೊಂಡುವಾದ ಅನುಸರಿಸುತ್ತಿದೆ.

j3tvkannada
ಬೇಸಿಗೆಯಲ್ಲಿ ನೀರು ವಿನಿಮಯದ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು. ಭಾರಿ ಮಳೆ ಸುರಿದರೆ ಮಹಾರಾಷ್ಟ್ರಅಪಾರ ಪ್ರಮಾಣದ ನೀರು ಹೊರಬಿಟ್ಟು ಕರ್ನಾಟಕದಲ್ಲಿ ಪ್ರವಾಹ ಸ್ಥಿತಿಗೆ ಕಾರಣವಾಗುತ್ತದೆ ಎಂದಿದ್ದಾರೆ ಅಶೋಕ ಚಂದರಗಿ, ಸಾಮಾಜಿಕ ಕಾರ್ಯಕರ್ತ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಘಟಪ್ರಭಾ ನದಿಯಲ್ಲೂ ಕಳೆದ ಎರಡು ದಿನಗಳಿಂದ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದಿದೆ. ಆ ಮೂಲಕ ಜಲರಾಶಿಯಿಂದ ಕಂಗೊಳಿಸುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ನದಿ ಬರಿದಾಗುತ್ತಾ ಸಾಗಿದ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದಿಂದ ನದಿಗೆ ಮತ್ತು ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಇದಾದ ಎರಡು ದಿನಗಳ ಬಳಿಕ ಜಿಲ್ಲೆಯಲ್ಲಿ ವರ್ಷಧಾರೆ ಆರಂಭವಾಗಿದ್ದರಿಂದ ನದಿ ರಭಸವಾಗಿ ಹರಿಯಲು ಶುರುವಾಗಿತ್ತು. ಕಳೆದ 15 ದಿನಗಳ ಹಿಂದೆಯಷ್ಟೇ ನೀರಿಗೆ ಪ್ರಯಾಸಪಡುತ್ತಿದ್ದ ರೈತರು ಈಗ ನದಿಯಲ್ಲಿನ ನೀರು ಮತ್ತು ಮಳೆಯಿಂದ ಸಂತಸಪಟ್ಟಿದ್ದಾರೆ.
ಜಮೀನುಗಳೀಗೆ ನೀರು ಹಾಯಿಸುವುದರ ಜತೆಗೆ ಕೃಷಿ ಚಟುವಟಿಕೆ ಶುರು ಮಾಡಿಕೊಂಡಿದ್ದಾರೆ. ಮಳೆ ಬಿಡುವು ಕೊಟ್ಟರೆ ಬಿತ್ತನೆಗೆ ಮುಂದಾಗಲಿದ್ದಾರೆ. ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಘಟಪ್ರಭಾ ನದಿಗೆ ಯಾವುದೇ ಸಂದರ್ಭದಲ್ಲಾದರೂ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ತೀರದ ಜನರಲ್ಲಿಆತಂಕ ಶುರುವಾಗಿದೆ. ನದಿ ದಡದಲ್ಲಿನ ಪಂಪ್ಸೆಟ್ಗಳನ್ನು ಶಿಫ್ಟ್ ಮಾಡುತ್ತಿದ್ದಾರೆ. ಜತೆಗೆ ಸುರಕ್ಷತೆಗೂ ಆದ್ಯತೆ ಕೈಗೊಳ್ಳುತ್ತಿದ್ದಾರೆ.