ಚಿಕ್ಕಮಗಳೂರು: ಮಲೆನಾಡಿನಲ್ಲಿ ಜನರಿಗೆ ಹಾವುಗಳು ಕಾಣ ಸಿಗುವುದು ಸರ್ವೇ ಸಾಮಾನ್ಯ. ಮನೆಯ ಪಕ್ಕ, ತೋಟಗಳಲ್ಲಿ ಕಾಡು ಗುಡ್ಡಗಳಲ್ಲಿ ಹಾವುಗಳು ಇರುತ್ತವೆ. ಆದರೆ ಇಲ್ಲಿ ಸರ್ಕಾರಿ ಕಚೇರಿಯ ಒಳಗೆ ನಾಗರ ಹಾವೊಂದು ಬುಸ್ ಗುಡುತ್ತಾ ಬಂದಿತ್ತು.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಎಂದಿನಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ದಿಢೀರ್ ಎಂದು ನಾಗರ ಹಾವು ಎಂಟ್ರಿ ಕೊಟ್ಟು ಸಿಬ್ಬಂದಿಗಳು ಬೆಚ್ಚಿ ಬೀಳುವಂತೆ ಮಾಡಿದೆ.

ಜಿಲ್ಲೆಯ ಸಮಾಜ ಸೇವಕ ಹಾಗೂ ಖ್ಯಾತ ಉರಗ ರಕ್ಷಕ ರಿಜ್ವಾನ್ ಅವರಿಗೆ ಕರೆ ಮಾಡಿ ಕಾರ್ಯಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ರಿಜ್ವಾನ್, ನಾಗರ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಡುವ ಕೆಲಸ ಮಾಡಿದ್ದಾರೆ.
ಇನ್ನೂ ಈ ನಾಗರ ಹಾವು ಸುಮಾರು ನಾಲ್ಕು ಆಡಿಗೂ ಅಧಿಕ ಉದ್ದವಿದ್ದು, ಯಾರಿಗೂ ಯಾವುದೇ ಪ್ರಾಣಪಾಯ ಆಗದಂತೆ ಹಾವನ್ನ ರಕ್ಷಣೆ ಮಾಡಿದ್ದಾರೆ. ನಾಗರ ಹಾವೊಂದು ಆಕಸ್ಮಿಕವಾಗಿ ಸರ್ಕಾರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದು ಮಾತ್ರ ಕಚೇರಿಯ ಅಧಿಕಾರಿಗಳಲ್ಲಿ ಕ್ಷಣ ಕಾಲ ಆತಂಕವನ್ನುಂಟು ಮಾಡಿತ್ತು. ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವ ಹಾಗೆ ಆಯಿತು.