
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 29 ದಿನಗಳ ಅವಧಿಯಲ್ಲಿ 2.54 ಕೋಟಿ ರೂ. ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಬಳಿಕ ಸಿಸಿ ಟಿವಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಬುಧವಾರ ಬೆಳಗ್ಗೆ ಪ್ರಾರಂಭವಾದ ಎಣಿಕೆ ರಾತ್ರಿ 9 ರ ವರೆಗೂ ನಡೆಯಿತು.

j3tvkannada
ಸರಕಾರಿ ರಜಾ ದಿನ, ಅಮಾವಾಸ್ಯೆ ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,54,27,263 ರೂ. ನಗದು, 69 ಗ್ರಾಂ ಚಿನ್ನ ಹಾಗೂ 2,770 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಇದಲ್ಲದೆ ಇ ಹುಂಡಿಯಿಂದ 5,32,555 ವಿದೇಶಿ 6 ನೋಟುಗಳು, ಚಲಾವಣೆಯಲ್ಲಿ ಇಲ್ಲದ 2000 ಮುಖ ಬೆಲೆಯ 12 ನೋಟುಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ.
ಎಣಿಕೆ ಕಾರ್ಯದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ಮಹದೇವ್, ಪ್ರಾಧಿಕಾರದ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಭಾರತಿ, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

j3tvkannada
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿನ ಸಮೂಹ ದೇವಾಲಯಗಳಾದ ಶ್ರೀ ಮಧ್ಯರಂಗನಾಥಸ್ವಾಮಿ, ಶ್ರೀ ಸೋಮೇಶ್ವರಸ್ವಾಮಿ ಮತ್ತು ಶ್ರೀ ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳಲ್ಲಿ 21.78 ಲಕ್ಷ ರೂ. ಸಂಗ್ರಹವಾಗಿದೆ. ಬೇಸಿಗೆ ರಜೆ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಭಕ್ತರರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಗಳಿಗೆ ಆಗಮಿಸಿ ನಗದು ಸೇರಿ ಚಿನ್ನವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ಈ ಪೈಕಿ ಒಟ್ಟು 21,78,740 ರೂ.ನಗದು, 2 ಗ್ರಾಂ ಚಿನ್ನ ಹಾಗೂ 8 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಎಣಿಕೆ ಕಾರ್ಯವನ್ನು ತಾಲೂಕು ಉಪವಿಭಾಗಾಧಿಕಾರಿ ಮಹೇಶ್ ಆದೇಶದಂತೆ ಶ್ರೀ ಮಧ್ಯರಂಗನಾಥಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ನಡೆಸಲಾಯಿತು. ಈ ಕಾರ್ಯದಲ್ಲಿ ಪಾಳ್ಯ ಉಪ ತಹಸೀಲ್ದಾರ್ ವಿಜಯ್ ಕುಮಾರ್, ರಾಜಸ್ವನಿರೀಕ್ಷಕ ರಂಗಸ್ವಾಮಿ, ಕಸಬಾ ರಾಜಸ್ವನಿರೀಕ್ಷಕ ನಿರಂಜನ್, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಲೆಕ್ಕಾಧಿಕಾರಿಗಳಾದ ಶಾಂತರಾಜು, ಪ್ರದೀಪ್, ಭೀಮಪ್ಪ, ಮಹೇಶ್, ಮಮತಾ, ರಾಕೇಶ್ ಮರಾಠ, ಅನಿಲ್, ಕೋಟೇಕ್ ಮಹೀಂದ್ರ ಬ್ಯಾಂಕ್ನ ವ್ಯವಸ್ಥಾಪಕರು, ಗ್ರಾಮ ಸಹಾಯಕರು, ದೇವಾಲಯದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಪಾಲ್ಗೊಂಡಿದ್ದರು.