
ಬೆಂಗಳೂರು: ಬೆಂಗಳೂರನ್ನು ಗ್ರೇಟರ್ ಅಲ್ಲ. ಕ್ವಾರ್ಟರ್ ಬೆಂಗಳೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್ ಸರಕಾರ ಬೆಂಗಳೂರನ್ನು ಮೂರು ಭಾಗ ಮಾಡಲು ಮುಂದಾಗಿದೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

j3tvkannada
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಯಾರದ್ದೋ ಜಮೀನಿನ ಮೌಲ್ಯ ಹೆಚ್ಚಾಗುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ. ಬೆಂಗಳೂರು ಭಾಗವಾದರೆ ಆದಾಯ ಬರುವುದಿಲ್ಲ. ಮೂರು ಪಾಲಿಕೆ ರಚನೆಯಾದರೆ ಅಲ್ಲಿ ಕನ್ನಡಿಗರೇ ಮೇಯರ್ ಆಗುತ್ತಾರೆಂಬ ಖಚಿತತೆ ಇಲ್ಲ ಎಂದು ಹೇಳಿದರು.
ಮುಖ್ಯ ಮಂತ್ರಿಯವರು ಪಾಲಿಕೆಯಿಂದ ಆಯ್ಕೆಯಾಗುವುದಿಲ್ಲ ಎಂದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಹೇಗೆ ಸಿ.ಎಂ ಸಿದ್ದರಾಮಯ್ಯ ಪಾಲಿಕೆ ಸಭೆಯಲ್ಲಿ ಬಂದು ಕೂರಲು ಸಾಧ್ಯವಿಲ್ಲ. ಬೆಂಗಳೂರು ಭಾಗ ಆಗಬಾರದು ಎಂಬುದು ಬಿ.ಜೆ.ಪಿಯ ಅಭಿಪ್ರಾಯ. ಮುಂದೆ ನಮ್ಮ ಸರಕಾರ ಬಂದರೆ ಬೆಂಗಳೂರನ್ನು ಒಂದು ಗೂಡಿಸುವ ಕೆಲಸ ಮಾಡುತ್ತೇವೆ. ಗ್ರೇಟರ್ ಬೆಂಗಳೂರಿಗೆ ವಿರುದ್ಧವಾಗಿ ಕಾನೂನು ಹೋರಾಟ ಮಾಡಲಿದ್ದೇವೆ, ಎಂದು ತಿಳಿಸಿದರು.
ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ತಮ್ಮ ಲಾಭಕ್ಕೆ ಎಲ್ಲವನ್ನೂ ಮಾಡುತ್ತಿದ್ದಾರೆ. ಬಿಡಿಎ ಲೇಔಟ್ಗಳು ಇನ್ನೂ ಖಾಲಿ ಇದ್ದು, ಅಲ್ಲಿಗೆ ನೀರು, ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ. ಬಿ.ಬಿ.ಎಂ.ಪಿ ಚುನಾವಣೆ ಮುಂದೂಡಲು ಈ ಯೋಜನೆ ಮಾಡಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ. ನಗರದ ಆಡಳಿತ ನಡೆಸಲು ಸಾಧ್ಯವಾಗದಿರುವ ವಿಫಲತೆಯನ್ನು ಒಪ್ಪಿಕೊಳ್ಳದೆ ಇಂತಹ ಯೋಜನೆ ತಂದಿದ್ದಾರೆ, ಎಂದು ವಾಗ್ದಾಳಿ ನಡೆಸಿದರು.
ಬಿ.ಬಿ.ಎಂ.ಪಿ ಮೂರು ವಿಭಜನೆಷ್ಟೇ:-
ಮೇ 15ರಿಂದ ಅನ್ವಯವಾಗುವಂತೆ ಗ್ರೇಟರ್ ಬೆಂಗಳೂರು ಆಡಳಿತ ಅನುಷ್ಠಾನಗೊಂಡಿದೆ. ಈ ನಡುವೆ ಬೆಂಗಳೂರಿನಲ್ಲಿ ಎಷ್ಟು ಪಾಲಿಕೆಗಳು ರಚನೆಯಾಗಲಿವೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಮೂರು ಪಾಲಿಕೆಗಳು ರಚನೆಯಾಗುವ ಸುಳಿವು ನೀಡಿದ್ದಾರೆ.
ಬಿ.ಜೆ.ಪಿ ಸರಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷತೆಯ ಬಿ.ಬಿ.ಎಂ.ಪಿ ಪುನಾರಚನೆ ಸಮಿತಿ, ವಿಸ್ತಾರವಾದ ಪ್ರದೇಶವುಳ್ಳ ಬಿ.ಬಿ.ಎಂ.ಪಿಯಲ್ಲಿ ಸುಗಮ ಆಡಳಿತಕ್ಕಾಗಿ ಗರಿಷ್ಠ 7 ಪಾಲಿಕೆ ರಚನೆಗೆ ಶಿಫಾರಸು ಮಾಡಿತ್ತು. ಬಳಿಕ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ವಿಧಾನಮಂಡಲ ಜಂಟಿ ಸದನ ಸಮಿತಿಯೂ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.
ತಜ್ಞರ ಸಮಿತಿಯ ಶಿಫಾರಸಿನಂತೆ ವಿಧೇಯಕದಲ್ಲಿ ಗರಿಷ್ಠ ಏಳು ಮಹಾನಗರ ಪಾಲಿಕೆ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಬಿ.ಬಿ.ಎಂ.ಪಿ ವಿಭಜನೆಗೆ ಪ್ರತಿಪಕ್ಷ ಬಿ.ಜೆ.ಪಿ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಬೆಂಗಳೂರು ಎಷ್ಟು ಪಾಲಿಕೆಯಾಗಿ ವಿಭಜನೆಯಾಗಲಿದೆ ಎಂಬ ಚರ್ಚೆ ನಡೆದಿರುವ ಹೊತ್ತಿನಲ್ಲೇ ಮುಖ್ಯ ಮಂತ್ರಿಯವರು ಮೂರು ಪಾಲಿಕೆ ರಚನೆ ಸಾಧ್ಯತೆ ಇದೆ ಎಂಬ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಅಂದ ಹಾಗೆ, ಗ್ರೇಟರ್ ಬೆಂಗಳೂರಿನಿಂದ ಉದ್ಯಾನ ನಗರಿಗೆ ಹೊಸ ಸ್ವರೂಪ ಸಿಗಲಿದೆ.
ಇತಿಹಾಸ ಸೇರಲಿದೆ ಬಿ.ಬಿ.ಎಂ.ಪಿ:-
ಗ್ರೇಟರ್ ಬೆಂಗಳೂರು ಕಾಯ್ದೆ ಜಾರಿಯಾದ ಬೆನ್ನಲ್ಲೇ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ಇತಿಹಾಸಗಳ ಪುಟ ಸೇರಿದೆ. ಅಧಿಕೃತವಾಗಿ ಬಿ.ಬಿ.ಎಂ.ಪಿಯನ್ನು ಮೂರು ಭಾಗಗಳಾಗಿ ವಿಭಜಿಸಲಾಗುತ್ತದೆ. ಈ ಎಲ್ಲವೂ ಸೇರಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿ.ಬಿ.ಎ) ಆಗಲಿದೆ. ಇನ್ನು, ಜಿ.ಬಿ.ಎ ಅಡಿಯಲ್ಲಿ ಇಡೀ ಬೆಂಗಳೂರಿಗೆ ಹೊಸ ಸ್ವರೂಪ ಸಿಗಲಿದೆ.