ಚಾಮರಾಜನಗರ: ಕಾನನದ ದಟ್ಟಾರಣ್ಯದಲ್ಲಿ ಇರುವ ದೇವಾಲಯವಾದ ಇಲ್ಲಿ ಪವಾಡ ಪುರಷನ ಪವಾಡಕ್ಕೆ ಬೆರಗಾಗಿ ಕೋಟ್ಯಾಂತರ ಭಕ್ತ ವೃಂದ ಆಗಮಿಸುತ್ತಿದೆ. ಆದರೆ ಇದೀಗ ಅಕ್ರಮ ಮದ್ಯ ಮಾರಾಟದಿಂದ ಮಾದಪ್ಪನ ಬೆಟ್ಟದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಚ್ಚು ಮೆಚ್ಚಿನ ಜಿಲ್ಲೆಗಳಲ್ಲಿ ಒಂದಾದ ಜಿಲ್ಲೆ ಚಾಮರಾಜನಗರ. ಯಾರೇ ಮುಖ್ಯಮಂತ್ರಿಯಾದರೂ ಚಾಮರಾಜನಗರ ಜಿಲ್ಲೆಗೆ ತೆರಳಲು ಹಿಂದೇಟು ಹಾಕುತ್ತಾರೆ. ಚಾಮರಾಜನಗರ ಜಿಲ್ಲೆಗೆ ಹೋದರೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವಾಡಿಕೆ ಇದೆ. ಆದರೆ, ಸಿ.ಎಂ ಸಿದ್ದರಾಮಯ್ಯ ಅನೇಕ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ಆ ಕಳಂಕವನ್ನು ತೊಡೆದು ಹಾಕಿದ್ದಾರೆ. ಏಳು ಮಲೆ ಎಪ್ಪತ್ತೇಳು ಮಲೆಯ ಒಡೆಯ, ದಂಡಕಾರಣ್ಯದ ನಡುವೆ ಬೆಟ್ಟದಲ್ಲಿ ನೆಲೆ ನಿಂತಿರುವ ಮಹದೇಶ್ವರ ಬೆಟ್ಟದಲ್ಲಿ ಇದೀಗ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ.

ಮದ್ಯ ಹಾಗೂ ತಂಬಾಕು ಮುಕ್ತ ಮಲೆ ಮಹದೇಶ್ವರ ಬೆಟ್ಟದ ಒತ್ತಾಸೆಗೆ ಬೆಟ್ಟದಲ್ಲೇ ವಾಸಿಸುವ ಕೆಲವು ಕಿಡಿಗೇಡಿಗಳು ಸಂಚಕಾರ ತಂದಿದ್ದಾರೆ. ಪಾವಿತ್ರ್ಯಕ್ಕೆ ತೊಡಕಾಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಎಗ್ಗಿಲ್ಲದೆ ಅಕ್ರಮ ನಡೆಯುತ್ತಿದ್ದು ಶನಿವಾರದಂದು ನಡೆದ ಪೊಲೀಸರ ದಾಳಿ ವೇಳೆ ಬರೋಬ್ಬರಿ 300 ಲೀಟರ್ ಮದ್ಯ ಸಿಕ್ಕಿದೆ.
ಮಲೆ ಮಹದೇಶ್ವರ ಬೆಟ್ಟವನ್ನ ಮದ್ಯ ಮುಕ್ತ ಪ್ರದೇಶವನ್ನಾಗಿಸುವ ಸಂಕಲ್ಪ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಕೆ.ಡಿ.ಪಿ ಸಭೆಯಲ್ಲಿ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಆದರೆ ಈಗ ಮತ್ತೆ ಮಲೆ ಮಹದೇಶ್ವರ ಬೆಟ್ಟದಲ್ಲಿ 300 ಲೀಟರ್ ಮದ್ಯ ಜಪ್ತಿಯಾಗಿದೆ. ಅಕ್ರಮವಾಗಿ ಮದ್ಯ ತಂದು ಮಾರಾಟ ಮಾಡುತ್ತಿದ್ದ ಸಿದ್ದಪ್ಪ ಹಾಗೂ ಮುತ್ತುರಾಜ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.