
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮತ್ತೊಂದು ರೈಲು ಮಾರ್ಗ ಮಂಜೂರಾತಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲು ಮಾರ್ಗದ ಅಂತಿಮ ಸರ್ವೇ ಮಾಡಲು ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ಆದೇಶ ಮಾಡಿದೆ. ಕೇಂದ್ರದ ರೈಲ್ವೇ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ರೈಲ್ವೇ ಜಂಕ್ಷನ್ನಿಂದ ಶಿವಮೊಗ್ಗ ಜಿಲ್ಲೆ ಭದ್ರಾವತಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದನ್ನು ದೃಢಪಡಿಸಿದ್ದಾರೆ.

j3tvkannada
ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಚನ್ನಗಿರಿ ಮಾರ್ಗವಾಗಿ ಭದ್ರಾವತಿಯಿಂದ ಚಿಕ್ಕಜಾಜೂರಿಗೆ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಇದರ ಅಂತರ 73 ಕಿ.ಮೀ ಇರಲಿದೆ. ಇದಕ್ಕಾಗಿ ಸರ್ಕಾರ 1825 ಕೋಟಿ ರೂ. ವೆಚ್ಚ ಮಾಡಲು ತಯಾರಾಗಿದೆ. ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆ ಈಗ ಅಕ್ಷರಶಃ ನಾಡಿನ ಮಧ್ಯ ಭಾಗವೇ ಆಗಿ ಹೋಗುತ್ತಿದೆ.

j3tvkannada
ರಾಜ್ಯದ ಎಲ್ಲಾ ದಿಕ್ಕುಗಳಿಂದಲೂ ಕೋಟೆನಾಡಿಗೆ ರೈಲು ಸಂಪರ್ಕ ಸಿಗುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಮಹತ್ವದ ಕೊಡುಗೆ ಸಿಕ್ಕಂತಾಗುತ್ತದೆ. ಈಗಾಗಲೇ ದಾವಣಗೆರೆ-ಚಿತ್ರದುರ್ಗ-ತುಮಕೂರು ಸಂಪರ್ಕ ಕಲ್ಪಸುವ ನೇರ ರೈಲು ಮಾರ್ಗದ ಕೆಲಸ ಭರದಿಂದ ಸಾಗುತ್ತಿದೆ. ಇದರ ನಡುವೆಯೇ ಈಗ ಕೇಂದ್ರ ಸರ್ಕಾರ ಮಲೆನಾಡಿನಿಂದ ಬಯಲು ಸೀಮೆಗೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗದ ಸರ್ವೇ ಮಾಡಲು ಆದೇಶಿಸಿದೆ. ಈಗ ಮಲೆನಾಡಿನಿಂದ ಅರೆ ಮಲೆನಾಡಿಗೆ ರೈಲು ಸಂಪರ್ಕ ಸಿಗುವುದರಿಂದ ಶಿವಮೊಗ್ಗ ಜಿಲ್ಲೆಗೆ ಬರುವ ಪ್ರವಾಸಿಗರು ಚಿತ್ರದುರ್ಗದ ಕಡೆಗೂ ಹಾಗೂ ಚಿತ್ರದುರ್ಗಕ್ಕೆ ಬಂದ ಪ್ರವಾಸಿಗರು ಶಿವಮೊಗ್ಗದ ಕಡೆಗೂ ಓಡಾಡಲು ಅನುಕೂಲವಾಗಲಿದೆ.
ಇಲ್ಲಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗೂ ರೈಲು ಮಾರ್ಗ ಇರುವುದರಿಂದ ಹಂಪಿಗೆ ಬರುವ ಪ್ರವಾಸಿಗರು ಮಲೆನಾಡು ತಲುಪಲು ಚಿತ್ರದುರ್ಗದ ಮೂಲಕ ಹಾದು ಹೋಗಬೇಕಾಗುತ್ತದೆ. ಇದರೊಟ್ಟಿಗೆ ತುಮಕೂರಿಗೆ ನೇರ ರೈಲು ಮಾರ್ಗ ಕೂಡಾ ಬಂದು ಸೇರುವುದರಿಂದ ಮಲೆನಾಡು, ಉತ್ತರ ಕರ್ನಾಟಕ ಭಾಗದ ಜನತೆ ರಾಜಧಾನಿ ಬೆಂಗಳೂರು ತಲುಪುವುದು ಸುಲಭವಾಗುತ್ತದೆ. ಈಗಾಗಲೇ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆ ಅಡಿಕೆಗೆ ಹೆಸರಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲೂ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಇಲ್ಲಿನ ಭೀಮ ಸಮುದ್ರ ಅಡಿಕೆ ಮಾರುಕಟ್ಟೆ ದೇಶದಲ್ಲೇ ಹೆಸರಾಗಿದೆ. ಈಗ ಅಡಿಕೆ ವರ್ತಕರು ಮಲೆನಾಡಿನಿಂದ ಬಯಲು ಸೀಮೆಗೆ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ರೈಲು ಮಾರ್ಗ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.