
ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯುವ ಹಲಸಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಗಿದೆ. 1.5 ಯಿಂದ 2ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಯುವ ಗುರಿ ಹೊಂದಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರದ ಕೆಲ ಹೋಬಳಿಗಳಲ್ಲಿ ಪ್ರತಿ ರೈತರು ತೋಟ, ಮನೆಗಳ ಸಮೀಪ ಕನಿಷ್ಠ ಒಂದೆರಡು ಸಸಿಗಳನ್ನು ಬೆಳೆಸಿದ್ದಾರೆ. ಕೆಲವು ರೈತರು ನಾನಾ ತಳಿಯ ಹಲಸನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದಾರೆ.

j3tvkannada
ಜಿಲ್ಲೆಯ ತೂಬಗೆರೆಯ ಹೋಬಳಿಯಲ್ಲಿ ವರ್ಷಕ್ಕೆ ಕನಿಷ್ಠ 1 ಸಾವಿರ ಟನ್ ಹಲಸು ಮಾರಾಟವಾಗುತ್ತಿದೆ. ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 1500-1800 ಟನ್ಗೂ ಹೆಚ್ಚು ಹಲಸು ಮಾರಾಟವಾಗುತ್ತಿದೆ. ಕೆಜಿ ಹಲಸು ಕನಿಷ್ಠ 15 ರೂಪಾಯಿಗೆ ಮಾರಾಟವಾಗುತ್ತಿದೆ. ಈ ವರ್ಷವೂ 1.5ರಿಂದ 2ಕೋಟಿ ವಹಿವಾಟಿನ ಗುರಿಯನ್ನು ಹೊಂದಲಾಗಿದ್ದು, ತೂಬಗೆರೆ ಹೊಬಳಿಯಲ್ಲಿ 40ರಿಂದ 50ಲಕ್ಷ ವಹಿವಾಟು ನಡೆದಿದೆ ಎಂಬ ಮಾಹಿತಿ ರೈತ ಮುಖಂಡರಿಂದ ಲಭ್ಯವಾಗಿದೆ.
ಹೊರ ರಾಜ್ಯದಲ್ಲಿ ಡಿಮ್ಯಾಂಡ್:-
ತೂಬಗೆರೆ ಹಲಸು ಬಹಳಷ್ಟು ವಿಶೇಷವಾಗಿದ್ದು, ಕರಾವಳಿ ಭಾಗದ ಜಿಲ್ಲೆಗಳಾದ ಮಂಗಳೂರು, ಉಡುಪಿ, ಚಿಕ್ಕಮಂಗಳೂರು, ಕುಂದಾಪುರ, ಮೈಸೂರು ಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಈ ಭಾಗದ ಹೆಚ್ಚಿನ ಮೇಳಗಳಲ್ಲಿ ತೂಬಗೆರೆ ಹಲಸು ಪ್ರಮುಖವಾಗಿರಲಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಆಂಧ್ರಪ್ರದೇಶ, ಕೇರಳದ ಗಡಿ ಭಾಗಗಳಲ್ಲಿಯೂ ಜಿಲ್ಲೆಯ ತೂಬಗೆರೆ ಹಲಸಿಗೆ ಬೇಡಿಕೆ ಹೆಚ್ಚಾಗಿದ್ದು, 100-200ಟನ್ಗೂ ಹೆಚ್ಚು ಹಲಸು ರಫ್ತು ಮಾಡಲಾಗುತ್ತದೆ.
ರೈತರು ರಿಲಯನ್ಸ್ ಮಾರುಕಟ್ಟೆಗಳಿಗೆ ವರ್ಷಕ್ಕೆ 800 ಟನ್ಗೂ ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಇದರ ಜತೆ ಜಿಲ್ಲೆಯ ನಾನಾ ಭಾಗದ ಹಲಸು ತಾಲೂಕು, ನಗರ, ಜಿಲ್ಲಾ ಮಟ್ಟದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಪಕ್ಕದಲ್ಲಿಯೂ ಮಾರಾಟಕ್ಕಾಗಿ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗಿದೆ.
ಮಾರುಕಟ್ಟೆಗೆ ಬೇಡಿಕೆ:-
ವಿದೇಶದಲ್ಲಿ ಹಲಸು ಬೇಡಿಕೆ ಹೆಚ್ಚಾಗಿದ್ದು, ರಫ್ತು ಮಾಡುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಸೂಕ್ತ ವ್ಯವಸ್ಥೆ ಮಾಡಿದರೆ ವಿದೇಶಕ್ಕೂ ರಫ್ತು ಮಾಡಲು ರೈತರು ಸಿದ್ಧವಾಗಿದ್ದಾರೆ.
ಜಿಲ್ಲೆಯ ಹಲಸು ತಳಿ:-
ಜಿಲ್ಲೆಯಲ್ಲಿ ನಾನಾ ತಳಿಯ ಹಲಸು ಬೆಳೆಯಲಾಗುತ್ತದೆ. ಪ್ರದೇಶಕ್ಕೆ ತಕ್ಕಂತೆ ಹಲಸುಗಳ ತಳಿಯ ಹೆಸರು ಪ್ರಚಾರವಾಗಿದೆ. ತೂಬಗೆರೆಯಲ್ಲಿ ವರ್ಷದ ಆರಂಭದಲ್ಲಿ ಸಿಗುವ ಶಿವರಾತ್ರಿ ಹಲಸು, ವರ್ಷದ ಕೊನೆ ಭಾಗದಲ್ಲಿ ಸಿಗುವ ಏಕಾದಶಿ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಚಂದ್ರ ಹಲಸು, ಬಂಗಾರ ಹಲಸು ಮುಂತಾದ ತಳಿಗಳು ಕಂಡು ಬರಲಿವೆ. ಹೊಸಕೋಟೆ ರೆಡ್, ಬೆಂಗಳೂರು ರೆಡ್, ನೆಲಮಂಗಲ ರೆಡ್ ಸೇರಿದಂತೆ ವಿವಿಧ ತಳಿಗಳು ಸಹ ಪ್ರಚಲಿತದಲ್ಲಿವೆ.
ಉತ್ತಮ ಆರೋಗ್ಯಕ್ಕೂ ಸಹಕಾರಿ:-
ಸಂಪೂರ್ಣ ಸಾವಯವ ಕೃಷಿಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಪ್ರಮುಖವಾದದ್ದು ಹಲಸು. ಇದನ್ನು ಸೇವಿಸುವುದರಿಂದ ರಕ್ತದೊತ್ತಡ ಸಮತೋಲನದಲ್ಲಿ ಇರುತ್ತದೆ. ವಿಟಮಿನ್ ಸಿ ಒದಗಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಲಸಿನ ಬೀಜದಲ್ಲಿನ ಪ್ರೋಟಿನ್, ವಿಟಮಿನ್ ಬಿ ಕ್ಯಾನ್ಸರ್ ತಡೆಯಬಲ್ಲದು. ನರವ್ಯೂಹಕ್ಕೆ ಸಹಕಾರಿ, ಮೂಳೆಗಳ ಆರೋಗ್ಯ ಹೆಚ್ಚಿಸಲಿದೆ. ಹೊಟ್ಟೆಯ ಹುಣ್ಣಿನ ಸಮಸ್ಯೆ ಪರಿಹಾರದ ಜತೆ ಚರ್ಮದ ಕಪ್ಪು ಕಲೆಗಳನ್ನು ನಿವಾರಿಸಲಿದೆ. ಶೀತ ಮತ್ತು ಸೋಂಕು ತಡೆಯಲು ನೆರವಾಗುವ ಜತೆ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣ ಮಾಡುತ್ತದೆ. ಹೃದಯದ ಸಮಸ್ಯೆಗಳಿದ್ದರೆ, ನಿಯಂತ್ರಣ ಮಾಡತ್ತದೆ. ಹೀಗೆ ಹಲಸು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.