
ರಾಮನಗರ : ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೇರಿದಂತೆ ರಾಜ್ಯಾದ್ಯಂತ ನೂರು ಕಡೆ ಕಾಂಗ್ರೆಸ್ ಭವನವನ್ನು ನಿರ್ಮಿಸಬೇಕು ಎನ್ನುವುದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಕೆಲಸ. ಇದನ್ನು, ಬಹಳಷ್ಟು ಬಾರಿ ಕಾಂಗ್ರೆಸ್ ಸಭೆಗಳಲ್ಲಿ ಡಿ.ಸಿ.ಎಂ ಹೇಳಿದ್ದುಂಟು. ಆ ಮೂಲಕ, ಬಿ.ಜೆ.ಪಿ ತಮ್ಮ ಸರ್ಕಾರದ ಅವಧಿಯಲ್ಲಿ ಏನು ಮಾಡಿತ್ತೋ, ಅದನ್ನೇ ದಿಟ್ಟೋ ಕಾಪಿ ಮಾಡಲು ಕಾಂಗ್ರೆಸ್ ಹೊರಟಿದೆ.

j3tvkannada
ನಗರದಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಆಯೋಜಿಸಿದ್ದರು. ಆ ವೇಳೆ, ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸುವ ವಿಚಾರಕ್ಕೆ ದೇಣಿಗೆ ಎತ್ತುವ ಮಾತುಗಳು ಕಾರ್ಯಕ್ರಮದಲ್ಲಿ ಕೇಳಿ ಬಂದವು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮ ಸಂಪುಟದ ಸಹದ್ಯೋಗಿಗಳ ಬಗ್ಗೆ ಕೇಳಿದ ಸಂದರ್ಭದಲ್ಲಿ, ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಬಗ್ಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. ಅದೇನಂದರೆ, ಅವರು ಕಾಂಗ್ರೆಸ್ ಪಾರ್ಟಿಯ ಅತ್ಯುತ್ತಮ ಆರ್ಗನೈಸರ್ ಮತ್ತು ಫಂಡ್ ರೈಸರ್ ಎಂದು.
ಈ ಹಿಂದೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸುವವರು ಎರಡು ಲಕ್ಷ ರೂಪಾಯಿ ಹಣವನ್ನು ಪಕ್ಷಕ್ಕೆ ನೀಡಬೇಕೆಂದು ಡಿ.ಕೆ ಶಿವಕುಮಾರ್ ಸೂಚಿಸಿದ್ದರು. ಆ ಹಣವನ್ನು, ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಡಿ.ಕೆ.ಶಿ ಹೇಳಿದ್ದರು. ಅದರಂತೆಯೇ, ಬಹುತೇಕ ಅಭ್ಯರ್ಥಿಗಳು ಅರ್ಜಿಯ ಜೊತೆ ಹಣವನ್ನು ನೀಡಿದ್ದರು. ಈಗ, ಒಟ್ಟಾರೆಯಾಗಿ ನೂರು ಕಚೇರಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವುದರೊಳಗೆ ನಿರ್ಮಿಸುವ ಪಣವನ್ನು ಡಿ.ಕೆ.ಶಿ ತೊಟ್ಟಿದ್ದಾರೆ.
ಯುವ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಕಾಂಗ್ರೆಸ್ ಭವನಕ್ಕೆ ವೈಯಕ್ತಿಕವಾಗಿ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು. ಇದರ ಬೆನ್ನಲ್ಲೇ, ಮಾತನಾಡಲು ಆರಂಭಿಸಿದ ಮಾಜಿ ಶಾಸಕ ಎಚ್.ಎಂ.ರೇವಣ್ಣ, ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ತಮ್ಮ ಕಾರ್ಯಾಲಯವನ್ನು ಮಾಡಿದ್ದಾರೆ ಎಂದು ಹೇಳಿದರು.
ಮಾತು ಮುಂದುವರಿಸಿದ ರೇವಣ್ಣ, ರಾಜ್ಯದಲ್ಲಿ 100 ಕಚೇರಿ ಆಗುತ್ತಿದೆಯೆಂದರ ಅದಕ್ಕೆ ಪ್ರೇರಣೆ ಎಂದರೆ ಅದು ಡಿ.ಕೆ ಶಿವಕುಮಾರ್ ಅವರು. ನಾನು ವೈಯಕ್ತಿಕವಾಗಿ ಒಂದು ಲಕ್ಷದ ಒಂದು ರೂಪಾಯಿ ಕೊಡುವುದಾಗಿ ಘೋಷಿಸಿದರು. ಆಗ ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನೋಡ್ರಪ್ಪಾ ನಮ್ಮ ಎಚ್.ಎಂ.ರೇವಣ್ಣ ಬಡವ, ಅವನ ಪರವಾಗಿ ನಾನೇ 10 ಲಕ್ಷ ಕೊಡುತ್ತೇನೆ. ಯೋಗೇಶ್ವರ್ ಕೂಡಾ ಬಡವ, ಅವನು ಒಂದು ರೂಪಾಯಿ ಕೊಡುವುದು ಬೇಡ. ಅವನ ಪರವಾಗಿ ನಾನೇ 25 ಲಕ್ಷ ಕೊಡುತ್ತೇನೆ ಎಂದು ಹೇಳಿದರು.
ಆಗ ಭಾಷಣ ಮಾಡಲು ಆರಂಭಿಸಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಗಡಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸಲು ಒಂದು ಕೋಟಿ ಕೊಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಲ್ಲಿ (ರಾಮನಗರ) ಕಾಂಗ್ರೆಸ್ ಭವನ ನಿರ್ಮಾಣ ಮಾಡುವುದಕ್ಕೆ 25 ಲಕ್ಷ ರೂಪಾಯಿ ನಾನು ನೀಡುತ್ತೇನೆ ಎಂದು ಹೇಳಿದರು.
ಆ ಮೂಲಕ, ಐದೇ ನಿಮಿಷದಲ್ಲಿ 65 ಲಕ್ಷ ರೂಪಾಯಿ ದೇಣಿಗೆಯ ಕಮಿಟ್ಮೆಂಟ್ ಅನ್ನು ತಮ್ಮ ಪಕ್ಷದ ನಾಯಕರಿಂದ ಡಿ.ಕೆ ಶಿವಕುಮಾರ್ ಮಾಡಿಸಿದರು. ನಾನು ರಾಮನಗರದಲ್ಲಿ ಸ್ವಂತಕ್ಕೆ ಎಂದು ಜಾಗವನ್ನು ಖರೀದಿಸಿದ್ದೆ, ನನ್ನ ಟ್ರಸ್ಟಿಗೂ ಬೇಕಾಗಿತ್ತು. ಈಗ ಇದರಲ್ಲಿ ಅರ್ದ ಜಾಗವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನೀಡುತ್ತಿದ್ದೇನೆ. ಇನ್ನು 10-15 ದಿನಗಳಲ್ಲಿ ಪತ್ರವನ್ನು ಕಾಂಗ್ರೆಸ್ ಹೆಸರಿಗೆ ಟ್ರಾನ್ಸಫರ್ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.