
ಕೊಪ್ಪಳ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಆಧರಿಸಿ ಜಿ.ಜನಾರ್ದನರೆಡ್ಡಿ ಅವರು ಜೈಲು ಸೇರಿದ ಬೆನ್ನಲ್ಲೇ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಅವರ ಅನರ್ಹತೆಯಿಂದ ತೆರವಾದ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಯ ಕನಸಿನೊಂದಿಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

j3tvkannada
ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ಮೇ 6 ರಿಂದ ಅನರ್ಹತೆ ಆದೇಶ ಜಾರಿಗೆ ಬರಲಿದೆ. ಈ ಆದೇಶ, ಮೇಲಿನ ಹಂತದ ನ್ಯಾಯಾಲಯ ತಡೆಯಾಜ್ಞೆ ನೀಡದ ಹೊರತು ಮುಂದಿನ ಆರು ವರ್ಷಗಳವರೆಗೆ ಮುಂದುವರಿಯಲಿದೆ. ಹೀಗಾಗಿ ಜಿ.ಜನಾರ್ದನರೆಡ್ಡಿ ಅವರು ಪ್ರತಿನಿಧಿಸುತ್ತಿದ್ದ ಗಂಗಾವತಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನ ಖಾಲಿಯಾಗಿದೆ, ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ. ಈ ಹಿನ್ನೆಲೆ ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಇತರ ಆಕಾಂಕ್ಷಿಗಳು ಉಪ ಚುನಾವಣೆಯ ಮೇಲೆ ಕಣ್ಣಿಟ್ಟು ತಮ್ಮದೇ ನೆಲೆಯಲ್ಲಿ ತಾಲೀಮು ಶುರು ಮಾಡಿದ್ದಾರೆ.
ಒಂದು ದಶಕ ಕಾಲ ರಾಜಕೀಯದಿಂದ ದೂರವೇ ಉಳಿದಿದ್ದ ರೆಡ್ಡಿ ಅವರು 2022 ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದರು. ಸುಪ್ರೀಂ ಕೋರ್ಟ್ನಿಂದ ಬಳ್ಳಾರಿ ಜಿಲ್ಲೆ ಪ್ರವೇಶ ನಿರ್ಬಂಧ ಹಿನ್ನೆಲೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಸ್ಥಾಪಿಸಿದರು. ಗಂಗಾವತಿ ಕ್ಷೇತ್ರದಿಂದ ಸ್ವಂತ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

j3tvkannada
ಶತಾಯಗತಾಯ ಗೆಲುವಿಗಾಗಿ ನಗರಸಭೆಯ ಬಹುತೇಕ ಸದಸ್ಯರನ್ನು ಪಕ್ಷಾಂತರ ಮಾಡಿಸಿದ್ದಲ್ಲದೇ ಕ್ಷೇತ್ರದ ಹಲವು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸದಸ್ಯರನ್ನು ತಮ್ಮ ರಾಜಕೀಯ ಚಾಣಾಕ್ಷತನದಿಂದ ಒಲಿಸಿಕೊಂಡಿದ್ದರು. ಈ ತಂತ್ರಗಳು, ಹಲವು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರಿಗೆ ನುಂಗಲಾರದ ತುತ್ತಾಗಿದ್ದವು.
2023 ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಅಭ್ಯರ್ಥಿಗಳು ಪ್ರಚಾರ ವೇಳೆ , ರೆಡ್ಡಿ ಅವರು ಗೆದ್ದ ನಂತರ ಕ್ಷೇತ್ರ ತೊರೆಯಲಿದ್ದಾರೆ. ಅವರು ಕ್ಷೇತ್ರದಲ್ಲಿ ಪೂರ್ಣಾವಧಿ ಇರುವುದಿಲ್ಲ. ಅವರು ಬಳ್ಳಾರಿಯಿಂದ ವಲಸೆ ಬಂದಿದ್ದು, ಇಲ್ಲಿಂದ ಮತ್ತೆ ಅಲ್ಲಿಗೆ ವಲಸೆ ಹೋಗಲಿದ್ದಾರೆ, ಎಂದು ಮತದಾರರನ್ನು ಸೆಳೆಯಲು ಹವಣಿಸಿದ್ದರು. ಆದರೆ, ರೆಡ್ಡಿಯ ತಂತ್ರಗಾರಿಕೆಯಿಂದ ಈ ಹೇಳಿಕೆಗಳು ಅಷ್ಟಾಗಿ ಪರಿಣಾಮ ಬೀರಲಿಲ್ಲ.

j3tvkannada
ಆರಂಭದಲ್ಲಿ ಗಂಗಾವತಿಯಲ್ಲೇ ಇದ್ದ ರೆಡ್ಡಿ ಅವರು, ಸುಪ್ರೀಂ ಕೋರ್ಟ್ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಿ ಆದೇಶಿಸುತ್ತಿದ್ದಂತೆ ಗಂಗಾವತಿಯಿಂದ ದೂರವೇ ಉಳಿದರು. ಕ್ಷೇತ್ರದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳತೊಡಗಿದರು. ಗಂಗಾವತಿ ಕ್ಷೇತ್ರದ ಜನ ಶಾಸಕರನ್ನು ಭೇಟಿಯಾಗಲು ಬಳ್ಳಾರಿ, ಬೆಂಗಳೂರಿಗೆ ತೆರಳುವ ಪರಿಸ್ಥಿತಿ ಉಂಟಾಯಿತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಅವರು ಅಪರಾಧಿಯಾಗಿ ಆರು ವರ್ಷ ಸೆರೆವಾಸ ಅನುಭವಿಸಬೇಕಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಜತೆಗೆ ಕ್ಷೇತ್ರದಿಂದ ಶಾಸ್ವತವಾಗಿ ದೂರವೇ ಉಳಿದಂತಾಗಿದೆ. ಸದ್ಯ ಗಂಗಾವತಿ ಕ್ಷೇತ್ರದಲ್ಲಿ ಶಾಸಕರಿಲ್ಲದ ಅನಾಥ ಭಾವ ಮೂಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿ.ಜನಾರ್ದನರೆಡ್ಡಿ 65,791 ಮತ ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ 57,794 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಬಿಜೆಪಿಯ ಪರಣ್ಣ ಮುನವಳ್ಳಿ ಅವರು 29,167 ಮತ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಉಭಯ ನಾಯಕರು, ತೆರವಾದ ಸ್ಥಾನದ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಜತೆಗೆ ತೆರೆಮರೆಯಲ್ಲಿ ಪೂರಕ ಕಸರತ್ತು ನಡೆಸಿದ್ದಾರೆ.
ಇವರ ಜತೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಮಾಜಿ ಸಂಸದ ಸಂಗಣ್ಣ ಕರಡಿ, ಕುರುಬ ಸಮುದಾಯದ ಹನುಮಂತ ಅರಸೀನಕೆರೆ ಉತ್ಸಾಹ ತೋರುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯಿಂದ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರೇ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಮುಖ ಪಕ್ಷಗಳಲ್ಲಿ ಮತ್ತಷ್ಟು ಹೊಸ ಆಕಾಂಕ್ಷಿಗಳು ಮುನ್ನೆಲೆಗೆ ಬಂದರೂ ಅಚ್ಚರಿಯಿಲ್ಲ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ ಬಿಜೆಪಿಯಿಂದ ಮತ್ತೊಮ್ಮೆ ನನಗೆ ಸ್ಪರ್ಧಿಸುವ ಅವಕಾಶ ನೀಡುವ ವಿಶ್ವಾಸವಿದೆ. ಪಕ್ಷದ ವರಿಷ್ಠರ ನಿರ್ಣಯದಂತೆ ನಡೆದುಕೊಳ್ಳುವೆ.