
ಬೀದರ್: ತುಮಕೂರು ಹೇಮಾವತಿ ಲಿಂಕ್ ಕೆನಾಲ್ ನೀರನ್ನು ಮಾಗಡಿ, ಕನಕಪುರ, ರಾಮನಗರಕ್ಕೆ ಕೊಂಡೊಯ್ಯಲು ಸರ್ಕಾರ ರಾಜಕೀಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೈಲಾಗದೆ ಇರೋರು ಮೈಕೊಚ್ಚಿಕೊಂಡ ಹಾಗೆ, ಯಾವುದೇ ತಾಂತ್ರಿಕ ವ್ಯವಸ್ಥೆ ಇಲ್ಲದೆ ಕಾಮಗಾರಿ ನಡೆಯುತ್ತಿದೆ. ನಾನು ಈಗಾಗಲೇ ಸಿ.ಎಂ ಅವರಿಗೆ ಸ್ಪಷ್ಟವಾದ ಪತ್ರ ಬರೆದಿದ್ದೇನೆ ಎಂದು ಹೇಳಿದರು.

j3tvkannada
ಕುಡಿಯುವ ನೀರಿಗಾಗಿ 1 ತಾಲೂಕಿನಿಂದ ಮತ್ತೊಂದು ತಾಲೂಕು, 1 ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯ ಜನರನ್ನ ಎತ್ತಿಕಟ್ಟುವಂತ ಕೆಲಸ ನಡೆಯುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದರಲ್ಲೂ ಡಿ.ಕೆ ಶಿವಕುಮಾರ್ ಅವರು ನೀರಾವರಿ ಸಚಿವರಾದ ಮೇಲೆ ಇದೆಲ್ಲ ಆಗಿರೋದು ಎಂದರು. ಈಗಾಗಲೇ 900 ಕ್ಯೂಸೆಕ್ಸ್ ನೀರನ್ನು ಗುಬ್ಬಿ, ತುರುವೇಕೆರೆ, ತುಮಕೂರು, ತುಮಕೂರು ಗ್ರಾಮಾಂತರಕ್ಕೆ ಮತ್ತು 388 ಕ್ಯೂಸೆಕ್ಸ್ ಕುಣಿಗಲ್ಗೆ ಹಂಚಿಕೆ ಮಾಡಿಯಾಗಿದೆ. ಒಟ್ಟಾರೆ 25 ಟಿಎಂಸಿ ನೀರು ಹಂಚಿಕೆಯಾಗಿ ಜನ ನೆಮ್ಮದಿಯಾಗಿದ್ದಾರೆ ಆದರೆ, ಇವರು ಬೇರೆ ಕುತಂತ್ರವನ್ನೇ ನಡೆಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಕೇಂದ್ರದ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು ಈ ಯೋಜನೆ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅಧ್ಯಯನಗೊಂಡ ಮೂಲ ಯೋಜನೆಯನ್ನು ಬದಿಗೊತ್ತಿ ಈ ಕಾಮಗಾರಿ ಮಾಡಲಾಗುತ್ತಿದೆ.
ತುಮಕೂರು ಶಾಖಾ ಕಾಲುವೆ ಕಿ.ಮೀ 70.36 ರಲ್ಲಿ ನೀರಿನ ಹರಿವು ಸುಮಾರು 1289 ಕ್ಯೂಸೆಕ್ಸ್ ಇದೆ. ಈ ಪೈಕಿ ತುರುವೇಕೆರೆ, ಗುಬ್ಬಿ, ತುಮಕೂರು, ತುಮಕೂರು ಗ್ರಾಮಾಂತರ ಪ್ರದೇಶಗಳ 96 ಕಿಮೀ ಉದ್ದದ ಈ ಭಾಗಕ್ಕೆ ಸುಮಾರು 901 ಕ್ಯೂಸೆಕ್ಸ್ ನೀರಿನ ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲೂಕಿಗೆ 388 ಕ್ಯೂಸೆಕ್ಸ್ ನೀರು ಹಂಚಿಕೆಯಾಗಿದೆ. ಈಗ ಮಾಡಲಾಗುತ್ತಿರುವ ಕಾಮಗಾರಿಗೆ ಹೆಚ್ಚುವರಿ ನೀರು ನೀಡಲು ಹೇಗೆ ಸಾಧ್ಯ ಎಂದು ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.
ಇದೊಂದು ಅವೈಜ್ಞಾನಿಕವಾಗಿರುವ ಕಾಮಗಾರಿಯಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಜಿಲ್ಲೆಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ದತೆಯನ್ನು ಶಮನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲೆಯ ಅಮಾಯಕ ರೈತರು ಸಂಕಷ್ಠಕ್ಕೆ ಈಡಾಗುವ ಸಾಧ್ಯತೆ ಇದೆ. ಈ ಕಾಮಗಾರಿ ಮಾಡುವುದರಿಂದ ಕುಣಿಗಲ್ ತಾಲೂಕಿನ ರೈತರಿಗೂ ತೊಂದರೆಯಾಗಲಿದೆ. ಅವರಿಗೆ ಮೀಸಲಿಟ್ಟಿರುವ ನೀರಿಗೂ ತತ್ವಾರ ಆಗಲಿದೆ ಎಂದು ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.