ಕೊಪ್ಪಳ : ಕೊಪ್ಪಳ ಜಿಲ್ಲೆಯ ಮಾವಿನ ಬೆಳೆಗೆ ದೇಶ, ವಿದೇಶದಲ್ಲಿ ಬೇಡಿಕೆ ಇದೆ. ಪ್ರತೀ ಜಿಲ್ಲೆಯಲ್ಲೂ ಸುಮಾರು 4000 ಹೆಕ್ಟರ್ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಈ ಬೆಳೆಯ ಬೇಸಾಯವನ್ನು ಕೈಗೊಂಡಿದ್ದಾರೆ. ಬೆನೆಶಾನ್, ದಶಹರಿ, ಸುವರ್ಣರೇಖಾ, ರಸಪುರಿ, ಮಲ್ಗೋವಾ, ಇಮಾಮ ಪಸಂದ, ಅಲ್ಲದೇ ಸಂಕರಣ ತಳಿಯಾದ ಮಲ್ಲಿಕಾ ಮತ್ತು ಚಟ್ನಿಕಾಯಿಗಳಾದ ಪುನಾಸ್, ಇತ್ಯಾದಿ 12ಕ್ಕೂ ಹೆಚ್ಚು ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.

“ಕೇಸರ ಮಾವು “ ಅತ್ಯಂತ ಜನಪ್ರಿಯವಾಗಿದ್ದು, ‘ಕೊಪ್ಪಳ ಕೇಸರ ಮಾವು’ ಎಂದೇ ಪ್ರಸಿದ್ದಿಯಾಗಿದೆ. ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು, ಜಿಲ್ಲೆಯ ಹಲವಾರು ಮಾವಿನ ತೋಟಗಳಿಗೆ ಭೇಟಿ ನೀಡಿ, ಮಾವು ಬೆಳೆಗಾರರಿಗೆ ಬೆಳೆ ನಿರ್ವಹಣೆ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮಾವು ಬೆಳೆಯುವ ರೈತರು ಈ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಆದಾಯ ಪಡೆಯುವ ಜೊತೆಗೆ, ಮಾವಿನ ಗಿಡಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಮಾವಿನ ಕಟಾವಿನ ಜೊತೆಗೆ ಗಿಡಗಳನ್ನು ಸಹ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ. ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ, ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗಿದೆ.