
ಬಳ್ಳಾರಿ: ತಾಲ್ಲೂಕಿನ ಡಿ.ಅಂತಾಪುರ ಕೊರಚರಹಟ್ಟಿಯ ಗ್ರಾಮದಲ್ಲಿನ ಕೆಲ ವ್ಯಕ್ತಿಗಳು ಆಂಧ್ರ ಮೂಲದ ಶಿವಾರೆಡ್ಡಿ ಎನ್ನುವ ವ್ಯಕ್ತಿಗೆ ನಕಲಿ ಬಂಗಾರವನ್ನು ಅಸಲಿ ಬಂಗಾರ ಎಂದು ನಂಬಿಸಿ 10 ಲಕ್ಷ ಹಣ ವಂಚಿಸಿ ಪರಾರಿಯಾದ ಘಟನೆ ನಡೆದಿದೆ.

j3tvkannada
ಕೊರಚರಹಟ್ಟಿ ಗ್ರಾಮದ ಆರೋಪಿ ತಿರುಪತಿ, ಇತನ ಸಹಚರರು ಸೇರಿ ಶಿವಾರೆಡ್ಡಿ ಅವರಿಗೆ ನಮ್ಮ ಬಳಿ 1 ಕೆಜಿ ಅಸಲಿ ಬಂಗಾರವಿದ್ದು 40 ಲಕ್ಷಕ್ಕೆ ಮಾರಾಟ ಮಾಡಲಾಗುವುದು ಎಂದು ದೂರವಾಣಿ ಕರೆಯ ಮೂಲಕ ತಿಳಿಸಿದ್ದಾರೆ.
ಶಿವಾರೆಡ್ಡಿ ಅವರು ಇವರ ಮಾತನ್ನು ನಂಬಿಕೊಂಡು 10 ಲಕ್ಷ ಹಣ ಸಮೇತ ತೋರಣಗಲ್ಲು ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ಆರೋಪಿ ತಿರುಪತಿ ಆತನ ಸಹಚರರು 125 ಗ್ರಾಂ ನಕಲಿ ಬಂಗಾರವನ್ನು ಶಿವಾರೆಡ್ಡಿಗೆ ಮಾರಾಟ ಮಾಡಿ 10 ಲಕ್ಷ ಪಡೆದು ಎಲ್ಲರೂ ತಕ್ಷಣ ಪರಾರಿಯಾಗಿದ್ದಾರೆ. ಶಿವಾರೆಡ್ಡಿಯವರು ಬಂಗಾರವನ್ನು ಪರಿಶೀಲಿಸಿದಾಗ ಅದು ನಕಲಿ ಬಂಗಾರ ಎಂದು ತಿಳಿದು ಬಂದಿದೆ. ಅವರು ವಂಚನೆಯ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೋರಣಗಲ್ಲು ಠಾಣೆಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ತಿರುಪತಿಯನ್ನು ಬಂಧಿಸಿ ಆತನಿಂದ 10 ಲಕ್ಷ ಹಣವನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ವಂಚನೆಗೆ ಒಳಗಾದ ಶಿವಾರೆಡ್ಡಿಯವರಿಗೆ ಹಣವನ್ನು ಮರಳಿಸಿದ್ದಾರೆ.
ನಕಲಿ ಬಂಗಾರ ಮಾರಾಟ ಮಾಡಿದ ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಸಾರ್ವಜನಿಕರು ಇಂತಹ ವಂಚಕರಿಂದ ಎಚ್ಚರದಿಂದ ಇರಬೇಕು. ಮೋಸದ ಜಾಲಕ್ಕೆ ಒಳಗಾಗಬಾರದು ಎಂದು ತೋರಣಗಲ್ಲು ಠಾಣೆಯ ಪಿಎಸ್ಐ ಯು.ಡಾಕೇಶ್ ತಿಳಿಸಿದ್ದಾರೆ.