
ಕೊಡಗು: ನಾಲ್ಕುನಾಡು ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೇಸಿಗೆ ಮಳೆ ಸುರಿಯುತ್ತಿದ್ದು, ಜನರ ಮನಸವನ್ನು ಉಲ್ಲಾಸಗೊಳಿಸಿದೆ. ಭರಣಿ ಮಳೆಯ ಗುಡುಗಿನ ಅಬ್ಬರ, ಮಳೆಯ ಬಿರುಸಿಗೆ ಕೆರೆತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸತತ ಮಳೆಯಾಗುತ್ತಿರುವುದರಿಂದ ವಾತಾವರಣ ತಂಪಾಗಿದೆ.

j3tvkannada
ಕಾಳು ಮೆಣಸಿನ ಬಳ್ಳಿಗಳಿಗೆ ವರದಾನ ಎನಿಸಿದ ಮಳೆ ಮಳೆಯಿಂದ ಅರಳಿದ ಅಣಬೆಗಳು ಮಳೆಯಿಂದ ಹಸಿರುಕ್ಕಿದ ಇಳೆ.
ಪ್ರತಿದಿನ ಮಧ್ಯಾಹ್ನದ ವೇಳೆಗೆ ದಟ್ಟನೆಯ ಮೋಡ ಕವಿದು ಸತತವಾಗಿ ಇಲ್ಲಿ ಮಳೆ ಸುರಿಯುತ್ತಿದ್ದು, ರೈತರಲ್ಲಿ ಉಲ್ಲಾಸ ಮೂಡಿಸಿದೆ. ಕಳೆದ ವರ್ಷದ ಮಳೆಯ ಕೊರತೆಯನ್ನು ನೀಗಿಸುವಂತೆ ಈ ಬಾರಿ ನಿರಂತರ ಮಳೆ ಸುರಿಯುತ್ತಿದೆ.
ನಾಲ್ಕುನಾಡು ವ್ಯಾಪ್ತಿಯ ಕೈಕಾಡು, ಪಾರಾಣೆ, ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ ಮುಂತಾದ ಹಲವು ಗ್ರಾಮಗಳಲ್ಲಿ ಸತತ ಮಳೆಯಾಗುತ್ತಿದ್ದು ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.
ಈ ಅವಧಿಯಲ್ಲಿ ಸುರಿಯುವ ಮಳೆಯಿಂದ ಕಾಳು ಮೆಣಸಿನ ಬಳ್ಳಿಗಳಿಗೆ ಅನುಕೂಲಕರವಾಗಿದ್ದು, ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಬೆಳೆಗಾರರು.
ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ, ಇಳುವರಿ ಕುಂಠಿತಗೊಂಡಿತ್ತು. ಏಪ್ರಿಲ್ ತಿಂಗಳಲ್ಲಿ ಬಹುತೇಕ ಈ ಭಾಗದಲ್ಲಿ ಮಳೆಯಾಗಿದ್ದು, ಕಾಳು ಮೆಣಸಿನ ಬಳ್ಳಿಗಳು ಚಿಗುರೊಡೆಯುತ್ತಿವೆ.
ಕಾಫಿಯ ತೋಟಗಳಲ್ಲಿ ಬೆಳೆಗಾರರು ಬಿರುಸಿನ ಕೆಲಸದಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬರುತ್ತಿವೆ. ಕಾಫಿಗಿಡಗಳನ್ನು ಸ್ವಚ್ಛಗೊಳಿಸುವುದು, ಮರಗಸಿ ಮಾಡುವುದು, ರಾಸಾಯನಿಕ ಗೊಬ್ಬರ ಹಾಕಲು ಗಿಡಗಳ ಬುಡ ಶುಚಿಗೊಳಿಸುವುದು ಮುಂತಾದ ಕೆಲಸಗಳಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.