
ರಾಯಚೂರು: ಜಿಲ್ಲೆಯಲ್ಲಿ ರಣ ಬಿಸಿಲು ಮುಂದುವರಿದಿದೆ. ಹೀಗಾಗಿ ಜಿಲ್ಲೆಯ ಜನ ಹೊರ ಜಿಲ್ಲೆಗಳ ತರಕಾರಿಯನ್ನೇ ಅವಲಂಬಿಸಬೇಕಾಗಿದೆ. ಬಿಸಿಲೂರಿಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಂದಿರುವ ಕಾರಣ ಪ್ರಮುಖ ತರಕಾರಿ ಬೆಲೆ ತುಸು ಹೆಚ್ಚಳವಾಗಿದೆ.

j3tvkannada
ಬೇಸಿಗೆ ಕಾರಣ ಎಳೆ ಸೌತೆಕಾಯಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿಕ್ಕಗಾತ್ರದ ಉದ್ದನೆಯ ಸೌತೆಕಾಯಿಯನ್ನು ಗ್ರಾಹಕರು ಕೇಳಿ ಖರೀದಿಸುತ್ತಿದ್ದಾರೆ. ಮಹಿಳೆಯರು ಮಳೆಗಾಲದಲ್ಲಿ ಚಿಪ್ಸ್ ಸವಿಯಲು ಕಳೆದ ವಾರ ಬೆಲೆ ಕಡಿಮೆ ಇದ್ದ ಕಾರಣ ಅಧಿಕ ಪ್ರಮಾಣದಲ್ಲಿ ಆಲೂಗಡ್ಡೆ ಖರೀದಿಸಿದ್ದರು. ಬೇಡಿಕೆ ಹೆಚ್ಚಾದ ಕಾರಣ ಸ್ವಲ್ಪ ಬೆಲೆ ಏರಿಕೆಯಾಗಿದೆ.
ಪ್ರತಿ ಕ್ವಿಂಟಾಲ್ಗೆ ಮೆಣಸಿನಕಾಯಿ, ಹೂಕೋಸು, ಗಜ್ಜರಿ, ಬೀಟ್ರೂಟ್, ಬೀನ್ಸ್, ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ದೊಡ್ಡ ಮೆಣಸಿನಕಾಯಿ, ಚವಳೆಕಾಯಿ, ಸೌತೆಕಾಯಿ ₹ 2 ಸಾವಿರ, ಆಲೂಗಡ್ಡೆ, ಎಲೆಕೋಸು ₹ 1 ಸಾವಿರ ಹೆಚ್ಚಾಗಿದೆ.
ತುಪ್ಪದ ಹಿರೇಕಾಯಿ ಬೆಲೆ ಮಾತ್ರ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ಪ್ರತಿ ಕ್ವಿಂಟಾಲ್ಗೆ ಬೆಳ್ಳುಳ್ಳಿ ₹ 2 ಸಾವಿರ, ಬದನೆಕಾಯಿ, ಟೊಮೆಟೊ ₹1 ಸಾವಿರ, ಈರುಳ್ಳಿ ₹500 ಕಡಿಮೆಯಾಗಿದೆ.
ಮಹಾರಾಷ್ಟ್ರದ ನಾಸಿಕ್ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಎಂದಿನಂತೆ ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಬಂದಿದೆ. ನೆರೆಯ ಜಿಲ್ಲೆ ಹಾಗೂ ರಾಯಚೂರು ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಬೆಳಗಾವಿ, ತೆಲಂಗಾಣದ ಹಾಗೂ ಆಂಧ್ರಪ್ರದೇಶದ ಕೆಲ ಜಿಲ್ಲೆಗಳಿಂದ ತರಕಾರಿ ರಾಯಚೂರು ಮಾರುಕಟ್ಟೆಗೆ ಬಂದಿದೆ. ಬಿಸಿಲು ಜಾಸ್ತಿ ಇರುವ ಕಾರಣ ಪ್ರಮುಖ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ತರಕಾರಿ ವ್ಯಾಪಾರಿ ರಾಜು ಹೇಳುತ್ತಾರೆ.