
ಕಲಬುರುಗಿ: ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ (ಕೆ.ಆರ್.ಐ.ಡಿ.ಎಲ್) ನಿಗಮವು ಉಪಗುತ್ತಿಗೆ ಮೂಲಕ ನಡೆಸಿದ ಮರಳು ಗಣಿಗಾರಿಕೆ ವಿರುದ್ಧ ಪರಿಶೀಲಿಸಿ, ಅಗತ್ಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸಚಿವಾಲಯದ ಆಪ್ತ ಕಾರ್ಯದರ್ಶಿ ನೆಲ್ಲಕುಂಟೆ ವೆಂಕಟೇಶಯ್ಯ ಅವರು ಏ.29ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದು ಸೂಚಿಸಿದ್ದಾರೆ.

j3tvkannada
ಕಾಗಿಣಾ ನದಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿರುವ ಕೆ.ಆರ್.ಐ.ಡಿ.ಎಲ್ ಉಪಗುತ್ತಿಗೆ ನೀಡಿ ಮರಳು ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ. ಅದಕ್ಕೆ ಸಹಕಾರ ನೀಡಿರುವ ಜಿಲ್ಲಾ ಮತ್ತು ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ದೂರು ಸಲ್ಲಿಕೆಯಾಗಿದೆ ಎಂದು ವೆಂಕಟೇಶಯ್ಯ ಅವರು ಗಣಿ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಾಗಿಣಾ ನದಿ ಪಾತ್ರದಲ್ಲಿ 40 ಎಕರೆ ಮರಳು ಬ್ಲಾಕಿನಲ್ಲಿ ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಳೆದ 2021ರಲ್ಲಿ ನಿಗಮಕ್ಕೆ ಅನುಮತಿ ನೀಡಿದೆ. ನದಿಯಿಂದ ಮರಳು ಎತ್ತಿ ತಂದು ದಾಸ್ತಾನು ಸ್ಥಳದಲ್ಲಿ ಸಂಗ್ರಹಿಸಲು ಕೆ.ಆರ್.ಐ.ಡಿ.ಎಲ್ ಮುಂದಾಗದೆ ಉಪ ಗುತ್ತಿಗೆ ನೀಡಿ ಮರಳು ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲಾ ಮತ್ತು ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯಲ್ಲಿನ ಅಧಿಕಾರಿಗಳು ಮರಳು ಅಕ್ರಮಕ್ಕೆ ಸಹಕರಿಸಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬಿ.ಜೆ.ಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಅವರು ಈಚೆಗೆ ಮುಖ್ಯಮಂತ್ರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದರು. ಮುಖ್ಯಮಂತ್ರಿ ಸಚಿವಾಲಯದಿಂದ ಬರೆದಿರುವ ಪತ್ರದ ಪ್ರಕಾರ ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡವು ಭಾಗೋಡಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಗೆ ಭೇಟಿ ನೀಡಲಿದೆ.
ಮಳೆ ಪ್ರವಾಹಕ್ಕಿಂತ ಮುಂಚೆ ತನಿಖೆಯಾಗಲಿ: –
ಕೆ.ಆರ್.ಐ.ಡಿ.ಎಲ್ ಅಧಿಕೃತ ಅನುಮತಿಯ ಮೂಲಕ ಮರಳುಅಕ್ರಮ ದಂಧೆ, ನಿಯಮ ಉಲ್ಲಂಘನೆ, ಮರಳು ಸಾಗಾಟ, ತೆರಿಗೆ ವಂಚನೆ, ನದಿಯ ಪರಿಸರ ಹಾಳಾದ ಕುರಿತು ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ಪ್ರವಾಹ ಬರುವ ಮುಂಚೆ ಸ್ಥಳ ಪರಿಶೀಲನೆ ನಡೆಸಬೇಕು ಎನ್ನುತ್ತಾರೆ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್. ಕಾಗಿಣಾ ನದಿಯಲ್ಲಿ ಕೆ.ಆರ್.ಐ.ಡಿ.ಎಲ್ ನಡೆಸುತ್ತಿದ್ದ ಮರಳು ಗಣಿಗಾರಿಕೆಯ ಅಕ್ರಮ ದಂಧೆಯಲ್ಲಿ ಮರಳು ತುಂಬಿಕೊಂಡು ಹಗಲು ರಾತ್ರಿ ಟಿಪ್ಪರ್ ವಾಹನಗಳು ಮಾಡಬೂಳ ಪೊಲೀಸ್ ಠಾಣೆಯ ಕಾಂಪೌಂಡ್ಗೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿವೆ. ಈ ಬಗ್ಗೆ ಸಮಗ್ರ ತನಿಖೆ ಮಾಡಲು, ಠಾಣೆಯ ಸಮೀಪವಿರುವ ಟೋಲ್ ಸಂಗ್ರಹ ಸ್ಥಳದಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಕಳೆದ ಜನವರಿ ತಿಂಗಳಿನಿಂದ ಏಪ್ರಿಲ್ ಮೊದಲ ವಾರದವರೆಗೆ ದಾಖಲಾಗಿರುವ ಸಮಗ್ರ ವಿಡಿಯೊ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ತನಿಖೆ ಮಾಡಿದರೆ ಮರಳು ಅಕ್ರಮ ದಂಧೆಯು ಬಯಲಿಗೆ ಬರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.