
ಗದಗ: ಪಟ್ಟಣದ ಅಂದ ಹೆಚ್ಚಿಸುವಲ್ಲಿ ಅಲ್ಲಿರುವ ಉದ್ಯಾನಗಳು ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಪುರಸಭೆಯು ತನ್ನ ವ್ಯಾಪ್ತಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ನೀಡಿದಷ್ಟೇ ಮಹತ್ವವನ್ನು ಉದ್ಯಾನಗಳ ಅಭಿವೃದ್ಧಿಗೂ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪಟ್ಟಣದ ವಿವಿಧ ಭಾಗಗಳಲ್ಲಿ ಏಳು ವಿಶಾಲ ಉದ್ಯಾನಗಳಿವೆ. ಅವುಗಳ ನಿರ್ವಹಣೆ ಸಂಪೂರ್ಣವಾಗಿ ಪುರಸಭೆಗೆ ಸೇರಿದೆ. ಅವುಗಳನ್ನು ಹೊರತುಪಡಿಸಿ ದಶಕಗಳಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಲವಾರು ನೂತನ ಬಡಾವಣೆಗಳಿಗೆ ಒಂದರಂತೆ ಮಧ್ಯಮ ಹಾಗೂ ಕಿರು ಉದ್ಯಾನಗಳಿವೆ.

j3tvkannada
ಪಟ್ಟಣದ ಪುರಸಭೆ ಕಾರ್ಯಾಲಯದ ಹಿಂಬದಿಯಲ್ಲಿ ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ವಿಶಾಲವಾದ ಉದ್ಯಾನವಿದ್ದು, ಅದು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಹುಲ್ಲುಹಾಸಿನೊಂದಿಗೆ ಸದಾ ಹಸಿರಿನೊಂದಿಗೆ ಕಂಗೊಳಿಸಬೇಕಿದ್ದ ಉದ್ಯಾನ ಮರಭೂಮಿಯಂತೆ ಬಣಗುಡುತ್ತಲಿದೆ. ಉದ್ಯಾನದ ಮಧ್ಯಭಾಗದಲ್ಲಿರುವ ಕಾರಂಜಿ ಹಾಳಾಗಿ ಹಲವು ವರ್ಷಗಳು ಗತಿಸಿದ್ದು, ಕಾರಂಜಿಯು ನೀರಿಲ್ಲದೆ ಹಾಳು ಸುರಿಯುತ್ತಲಿದೆ. ಅಲ್ಲಿದ್ದ ಕಬ್ಬಿಣದ ಜೋಕಾಲಿ ಹಾಗೂ ಮತ್ತಿತರ ಮಕ್ಕಳ ಆಟಿಕೆ ಸಲಕರಣೆಗಳು ಹಾಳಾಗಿ ಹೋಗಿವೆ. ಈಚೆಗೆ ಕೆನರಾ ಬ್ಯಾಂಕಿನವರು ಅಲ್ಲಿ ಹಲವು ಆಸನಗಳನ್ನು ಹಾಕಿದ್ದು, ಸಾರ್ವಜನಿಕರ ವಿಶ್ರಾಂತಿಗೆ ಅನಕೂಲವಾಗಿದೆ.

j3tvkannada
ಉದ್ಯಾನದ ಪಕ್ಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಶುದ್ದೀಕರಣ ಘಟಕದಿಂದ ನಿತ್ಯ ಅಪಾರ ಪ್ರಮಾಣದ ನೀರಿನ ತ್ಯಾಜ್ಯ ಪಕ್ಕದಲ್ಲಿರುವ ಸಾರ್ವಜನಿಕ ಮೂತ್ರಾಲಯದ ಮೂಲಕ ಹರಿದು ಚರಂಡಿ ಸೇರುತ್ತಲಿದೆ. ನೀರಿನ ತ್ಯಾಜ್ಯವನ್ನು ಚರಂಡಿಗೆ ಹರಿಸುವ ಬದಲು ಅದನ್ನು ಸಂಸ್ಕರಿಸಿ ಉದ್ಯಾನಕ್ಕೆ ಬಳಸಿದರೆ ಮರಗಿಡಗಳನ್ನು ಸದಾ ಹಸಿರಿನಿಂದ ಇಟ್ಟು ಕೊಳ್ಳಬಹುದಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಪಟ್ಟಣದ ವಿವೇಕಾನಂದ ನಗರದಲ್ಲಿ ಸುಂದರವಾದ ಪಂಚವಟಿ ಉದ್ಯಾನ ನಿರ್ಮಿಸಲಾಗಿದೆ. ಅಲ್ಲಿ ವಿವಿಧ ಆಯುರ್ವೇದ ಸಸ್ಯಗಳು ಸೇರಿದಂತೆ ವೈವಿಧ್ಯದ ಗಿಡ, ಮರಗಳನ್ನು ಬೆಳೆಸಲಾಗಿತ್ತು.
ಕ್ರಿಮಿಕೀಟಗಳ ಉಪಟಳ ಹೆಚ್ಚಾಗುತ್ತದೆ ಹಾಗೂ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಲಿವೆ ಎನ್ನುವ ದೂರುಗಳು ಬಂದ ಹಿನ್ನಲೆಯಲ್ಲಿ ಉದ್ಯಾನದಲ್ಲಿ ಬೆಳೆದಿದ್ದ ಸಾಕಷ್ಟು ಗಿಡಗಳನ್ನು ತೆರವುಗೊಳಿಸಲಾಯಿತು. ಇದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೂ ಕಾರಣವಾಯಿತು. ರಾಮೇನಹಳ್ಳಿ ರಸ್ತೆ ಬದಿಯಲ್ಲಿ ಕಿರು ಉದ್ಯಾನವೊಂದಿದ್ದು, ಅಲ್ಲಿ ಸುಂದರವಾದ ಪರಮೇಶ್ವರನ ಮೂರ್ತಿ ನಿರ್ಮಿಸಲಾಗಿದೆ. ಈಗ ಪರಮೇಶ್ವರ ಮೂರ್ತಿಯ ಕೆಲವು ಭಾಗಗಳು ಭಗ್ನಗೊಂಡಿದ್ದು, ಅದನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉದ್ಯಾನದಲ್ಲಿದ್ದ ಜೋಕಾಲಿ, ಜೀಕುಬಂಡಿ, ಜಾರುಬಂಡಿ ಮೊದಲಾದವುಗಳು ನಾಶವಾಗಿದ್ದು, ಪುರಸಭೆಯವರು ಅವುಗಳನ್ನು ದುರಸ್ತಿಗೊಳಿಸಬೇಕಿದೆ.
ಪಟ್ಟಣದ ಜೆ.ಎಚ್.ಪಟೇಲ ನಗರದಲ್ಲಿ ಎರಡು ಉದ್ಯಾನಗಳಿದ್ದು, ಅವು ಮೂಲಸೌಲಭ್ಯಗಳಿಲ್ಲದೆ ಬಣಗುಡುತ್ತಲಿವೆ.