ಬೆಂಗಳೂರು : ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಸ್ಥಳದ ಆಯ್ಕೆಯನ್ನು ಕರ್ನಾಟಕ ಸರ್ಕಾರ ಅಂತಿಮಗೊಳಿಸಿದೆ. ಬೆಂಗಳೂರು ಸಮೀಪವೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಕನಕಪುರ ರಸ್ತೆಯಲ್ಲಿ ಎರಡು ಜಾಗಗಳು ಹಾಗೂ ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಸೇರಿ ಒಟ್ಟು 3 ಜಾಗಗಳನ್ನು ಅಂತಿಮಗೊಳಿಸಿದೆ. ಪ್ರಸ್ತಾವನೆಯ ಪ್ರಕಾರ ಎರಡು ಸ್ಥಳಗಳು ಬೆಂಗಳೂರಿನ ದಕ್ಷಿಣ ಭಾಗದ ಕನಕಪುರ ರಸ್ತೆಯಲ್ಲಿವೆ.

j3tvkannada.in
ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಕಡೆ ಹಾಗೂ ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಕಡೆ ಸ್ಥಳ ಗುರುತಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕರ್ನಾಟಕದ ಮೂಲ ಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಸ್ಥಳಗಳು ಕ್ರಮವಾಗಿ 4,800 ಮತ್ತು 5,000 ಎಕರೆ ಭೂಮಿಯ ವಿಸ್ತೀರ್ಣವನ್ನು ಹೊಂದಿವೆ.
ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿದೆ. ಈ ಎರಡು ಸ್ಥಳಗಳಲ್ಲಿ ಒಂದು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದರೆ ಇನ್ನೊಂದು ಜಾಗ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಾರೋಹಳ್ಳಿ ಬಳಿ ಗುರುತಿಸಲಾದ ಸ್ಥಳಗಳಲ್ಲಿ ಒಂದು ಹಸಿರು ಮಾರ್ಗದ ಕೊನೆಯ ಮೆಟ್ರೊ ನಿಲ್ದಾಣಕ್ಕಿಂತ 10 ಕಿಮಿ ಅಂತರದಲ್ಲಿದೆ. ಈ ಕುರಿತು ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿರುವ ಸ್ಥಳವನ್ನ ಮೂರನೇ ಜಾಗವನ್ನಾಗಿ ಗುರುತಿಸಲಾಗಿದೆ. ಕುಣಿಗಲ್ ರಸ್ತೆಯಲ್ಲಿರುವ ಸ್ಥಳ ಸುಮಾರು 5,200 ಎಕರೆ ಭೂಮಿಯನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ರಾಜ್ಯ ಸರ್ಕಾರವು ಸಚಿವಾಲಯ ಅಂತಿಮಗೊಳಿಸಿದ ಯಾವುದೇ ಸ್ಥಳದಲ್ಲಿ ಕನಿಷ್ಠ 4,500 ಎಕರೆ ಭೂಮಿಯನ್ನು ಒದಗಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.