
ವಿಜಯನಗರ: ರಾಮ್ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ ಮತ್ತು ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎ.ನ್ಎಚ್.ಎಸ್)ಯ ಸಂಶೋಧಕರ ತಂಡ ಬೇಟಿ ನೀಡಿ, ಪಟ್ಟಣದ ಗ್ರೀನ್ ಎಚ್.ಬಿ.ಎಚ್ ತಂಡ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಪಕ್ಷಿಗಳು ಮತ್ತು ಅದರ ಜೀವ ವೈವಿಧ್ಯತೆಯನ್ನು ವೈಜ್ಞಾನಿಕವಾಗಿ ದಾಖಲಿಸುವ ಸಮೀಕ್ಷೆಗೆ ಮುಂದಾಗಿದೆ.

j3tvkannada
ಸೊಸೈಟಿಯ ಉಪ ನಿರ್ದೇಶಕ ಸುಜಿತ್ ಎಸ್.ನರ್ವಾಡ ಮಾತನಾಡಿ, ಪಕ್ಷಿಧಾಮದದಲ್ಲಿರುವ ಸ್ಥಳೀಯ ಮತ್ತು ದೇಶ ವಿದೇಶಗಳಿಂದ ವಲಸೆ ಬರುವ ನೂರಾರು ಪ್ರಭೇದಗಳ ಪಕ್ಷಿಗಳ ಆವಾಸ ಸ್ಥಾನ, ಸಂತಾನೋತ್ಪತ್ತಿ, ಪಕ್ಷಿಗಳ ಜೀವ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತಂತೆ ನಿಖರ ಮಾಹಿತಿಯನ್ನು ದಾಖಲಿಸಲಾಗುವುದು. ಅಪರೂಪದ ಪಕ್ಷಿಗಳಿಗೆ ರಿಂಗ್ ಹಾಕಿ, ಉಪಗ್ರಹ ಆಧಾರಿತ ಅಧ್ಯಯನ ನಡೆಸಲಾಗುವುದು,
ಸೈಬೀರಿಯಾದಿಂದ ವಲಸೆ ಬರುವ ಪಕ್ಷಿಗಳಿಗೆ ಇರುವ ಅಪಾಯಗಳ ಕುರಿತಂತೆ ಅಧ್ಯಯನ ನಡೆಸಲಾಗುವುದು. ಎರಡು ವರ್ಷಗಳಲ್ಲಿ ಸಮಗ್ರವಾಗಿ, ವೈಜ್ಞಾನಿಕವಾಗಿ, ನಿಖರವಾಗಿ ಅಧ್ಯಯನ ನಡೆಸಿ ವರದಿ ನೀಡಲಾಗುವುದು ಎಂದು ತಿಳಿಸಿದರು.
ಅಪರೂಪದ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಗೆ ಮುಂದಾಗಿರುವುದು ವಿಶೇಷ, ಬಣ್ಣದ ಕೊಕ್ಕರೆ (ಪೇಂಟೆಂಡ್ ಸ್ಟಾರ್ಕ್), ಹೆಜ್ಜಾರ್ಲೆ(ಪೆಲಿಕಾನ್) ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹವಾಗಿದೆ, ತಾಲ್ಲೂಕಿನ ನಾರಾಯಣ ದೇವರಕೆರೆ, ನಕರಾಳ್ ತಾಂಡಾದ ಬಳಿಯ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿದ ತಂಡದ ಸದಸ್ಯರು ಬ್ಲೂಟೇಲ್ಡ್ ಬೀ ಈಟರ್, ಓರಿಯಂಟಲ್ ಪ್ರಾಟಿನ್ಯೂಲ್, ಸ್ಮಾಲ್ ಪ್ರಾಟಿಸ್ಕೋಲ್ ಪಕ್ಷಿಗಳ ಗೂಡು ಕಟ್ಟುವಿಕೆ ಮತ್ತು ಸಂತಾನೋತ್ಪತ್ತಿಯ ತಾಣಗಳನ್ನು ಗುರುತಿಸಿದರು. ಜಿ.ಪಿ.ಎಸ್ ನಕ್ಷೆ ದಾಖಲಿಸಿ ಬಾನಾಡಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಗ್ರೀನ್ ಎಚ್.ಬಿ.ಎಚ್ ತಂಡದ ಸದಸ್ಯರಿಗೆ ವಿವರಿಸಿದರು.