
ಹಾವೇರಿ : ರಾಜ್ಯ ಸರ್ಕಾರದ ಗ್ಯಾರಂಟಿಗಳು ಜನಪರವಾಗಿವೆ. ಜನರ ಮನ ಗೆದ್ದಿರುವ ಯೋಜನೆಗಳಿಂದ ಖಜಾನೆ ಖಾಲಿ ಆಗಿರುವುದಾಗಿ ಬಿಜೆಪಿಯವರು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಅದನ್ನು ಜನರು ನಂಬಬಾರದು. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ವರ್ಷದ ಬಜೆಟ್ ಗಾತ್ರ 38 ಸಾವಿರ ಕೋಟಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

j3tvkannada
ತಾಲ್ಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ 650 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನೀವು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಮ್ಮ ಸರ್ಕಾರಕ್ಕೆ ಕೊಟ್ಟ ಮತಗಳನ್ನು ನಾವು ಘನತೆಯಿಂದ ಗೌರವಿಸಿದ್ದೆವೆ. ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆ, ಸರ್ಕಾರ ಬಂದ ಕ್ಷಣದಲ್ಲಿಯೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು.
ಈ ಬಾರಿ ಬಂಡವಾಳ ವೆಚ್ಚಕ್ಕಾಗಿ 83 ಸಾವಿರ ಕೋಟಿ ತೆಗೆದಿರಿಸಿದ್ದೇವೆ. ಕಳೆದ ವರ್ಷಕ್ಕಿಂತ 31 ಸಾವಿರ ಕೋಟಿ ಬಂಡವಾಳ ವೆಚ್ಚ ಹೆಚ್ಚಾಗಿದೆ. ಹೆಚ್ಚುವರಿಯಾಗಿ 50 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ತೆಗೆದಿಟ್ಟಿದ್ದೇವೆ. 1.33 ಲಕ್ಷ ಸಾವಿರ ಕೋಟಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. ಆದರೆ, ಈ ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಹಸಿ ಸುಳ್ಳು ಹೇಳುವ ಸಂಪ್ರದಾಯಕ್ಕೆ ಬಿಜೆಪಿಯವರೇ ಉದಾಹರಣೆ ಎಂದು ಟೀಕಿಸಿದರು.
ಜನರ ಪರವಾಗಿರುವ ನಮ್ಮ ಸರ್ಕಾರದ ವಿರುದ್ಧವೇ ಆರ್.ಅಶೋಕ ಹಾಗೂ ವಿಜಯೇಂದ್ರ ನಕಲಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. ಅಚ್ಚೇ ದಿನ್ ಆಯೆಗಾ ಎಂದು ಮೋದಿಯವರು ಹೇಳಿದ್ರಲ್ಲ. ಎಲ್ಲಿ ಬಂತು ಅಚ್ಚೇ ದಿನ್ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣಿಸುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.