ಮೈಸೂರು: ತಾಲ್ಲೂಕಿನ ಗಡಿಭಾಗದ ಕಾಳಮ್ಮನಕೊಪ್ಪಲು ಗ್ರಾಮದೇವತೆ ಕಾಳಮ್ಮದೇವಿಯ ರಥೋತ್ಸವ ನೂರಾರು ಮಂದಿಯ ಜಯ ಘೋಷಣೆಯೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು.

j3tvkannada
ಕಳೆದ ಮೂರು ದಿನಗಳಿಂದ ಕಾಳಮ್ಮದೇವಿಯ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಹಿಳೆಯರು ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ದೇವಾಲಯದ ಹೊರ ಪ್ರಾಂಗಣದಲ್ಲಿ ಹೂವಿನಿಂದ ಮಾಡಿ ನಿಲ್ಲಿಸಲಾಗಿದ್ದ ರಥಕ್ಕೆ ಗುಡ್ಡಪ್ಪ ಕಾಳಮ್ಮದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಶಾಸಕ ಡಿ.ರವಿಶಂಕರ್ ದೇವಿಯ ರಥ ಎಳೆದರು. ನೂರಾರು ಭಕ್ತರು ದೇವಿಗೆ ಜಯ ಘೋಷಣೆ ಕೂಗಿದರು. ರಥವನ್ನು ದೇವಾಲಯದ ಸುತ್ತ ಭಕ್ತಿಯಿಂದ ಎಳೆದು ತರುವ ವೇಳೆ ಭಕ್ತರು ಹಣ್ಣು ಮತ್ತು ಧವನವನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದರು.
ಕಾಳಮ್ಮದೇವಿಯ ರಥವನ್ನು ಭಕ್ತರು ದೇವಾಲಯದ ಸುತ್ತ ಎಳೆದಾಗ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಿದ್ದರು. ಕೆಲವು ಮಹಿಳೆಯರು ಇಷ್ಟಾರ್ಥ ಸಿದ್ಧಿಯಾದ ಮೇರೆಗೆ ಪೂಜೆಯನ್ನು ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡುವ ಮೂಲಕ ಹರಕೆ ತೀರಿಸುತ್ತಿದ್ದರು. ರಥೋತ್ಸವಕ್ಕೆ ಕಾಳಮ್ಮನ ಕೊಪ್ಪಲಿನ ಅಕ್ಕಪಕ್ಕದ ಭಕ್ತರೂ ಕೂಡಾ ಆಗಮಿಸಿದ್ದರು.