
ಉಡುಪಿ: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಿಸಲು ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ಯನ್ನು ರಚಿಸಲಿದ್ದೇವೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.

j3tvkannada
ಕೋಮು ಸೂಕ್ಷ್ಮ ಪರಿಸ್ಥಿತಿಯ ಕುರಿತು ಅವಲೋಕಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರ ಜೊತೆ ವಿಶೇಷ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ಪ್ರತ್ಯೇಕವಾಗಿ ರಚಿಸುತ್ತೇವೆ. ಇದು ಪೊಲೀಸರ ಸಹಯೋಗದಲ್ಲಿ ಕೆಲಸ ಮಾಡಲಿದೆ. ಯಾರು ಕೋಮು ಚಟುವಟಿಕೆಗಳನ್ನು ನಡೆಸುತ್ತಾರೆ, ಯಾರು ಅದನ್ನು ಬೆಂಬಲಿಸುತ್ತಾರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾರ್ಯಪಡೆಗೆ ಒದಗಿಸುತ್ತೇವೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ವರ್ಷಗಳಿಂದ ಕೋಮು ಹಿಂಸಾಚಾರ ಮರುಕಳಿಸುತ್ತಿದೆ. ಅನೇಕ ಸಂದರ್ಭಗಳಲ್ಲಿ ಈ ಕಾರಣಕ್ಕಾಗಿಯೇ ಈ ಎರಡು ಜಿಲ್ಲೆಗಳು ರಾಜ್ಯದ ಮತ್ತು ರಾಷ್ಟ್ರದ ಗಮನ ಸೆಳೆದಿವೆ. ಈ ಎರಡು ಜಿಲ್ಲೆಗಳಲ್ಲಿ ಶಾಂತಿ ಸ್ಥಾಪಿಸುವುದೇ ಈ ಕಾರ್ಯಪಡೆ ರಚನೆಯ ಉದ್ದೇಶ ಎಂದು ತಿಳಿಸಿದರು.
ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ನಡೆದ ಬಳಿಕ ಈ ಜಿಲ್ಲೆಗಳಲ್ಲಿ ಕೋಮು ಹಿಂಸೆ ಮತ್ತೆ ಮರುಕಳಿಸಿದೆ ಎಂಬ ಭಾವನೆ ಜನರಲ್ಲಿ ಬಂದಿರಬಹುದು. ಜನ ಸಮುದಾಯ ಇದನ್ನು ಇಷ್ಟ ಪಡುವುದಿಲ್ಲ. ಈ ಜಿಲ್ಲೆಗಳು ಶಾಂತಿಯಿಂದ ಇರಬೇಕು, ಜನ ಶಾಂತಿಯಿಂದ ಬದುಕಬೇಕು. ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರ ಬಯಸುತ್ತದೆ. ಇದನ್ನು ಗಮನ ದಲ್ಲಿಟ್ಟುಕೊಂಡು ಎರಡು ವರ್ಷಗಳಿಂದ ಎಲ್ಲಾ ರೀತಿಯ ಕ್ರಮ ತೆಗದುಕೊಂಡಿದ್ದೆವು. ಗುಂಪು ಹಲ್ಲೆ ನಡೆಸಿ ಕೇರಳದ ವಯನಾಡಿನ ಅಶ್ರಫ್ ಎಂಬವನನ್ನು ಕೊಲೆ ಮಾಡಿದ್ದು ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಕೋಮು ಸೌಹಾರ್ದಕ್ಕೆ ಸವಾಲಾಗಿವೆ ಎಂದರು. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಹಾಗೂ ಅಶ್ರಫ್ ಹತ್ಯೆ ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ದುಷ್ಟ ಶಕ್ತಿಗಳು ಜಿಲ್ಲೆಯ ಶಾಂತಿ ಹಾಳು ಮಾಡಲು ಬಿಡುವುದಿಲ್ಲ. ಕೋಮು ಹಿಂಸಾಚಾರದಲ್ಲಿ ತೊಡಗುವವರು ಯಾವುದೇ ಸಮುದಾಯದವರಾಗಲೀ, ಅವರು ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಅವರನ್ನು ಹತ್ತಿಕ್ಕುತ್ತೇವೆ. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕೋಮುಗಲಭೆಗಳ ಹಿಂದೆ ಅಡಗಿರುವ ಶಕ್ತಿಗಳ ಹುಟ್ಟಡಗಿಸುವುದಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ರಾಜ್ಯ ಮತ್ತು ರಾಷ್ಟ್ರದ ಹಿತ ದೃಷ್ಟಿಯಿಂದ ಇನ್ನೆಂದೂ ಇಂತಹ ಘಟನೆ ಮರುಕಳಿಸಬಾರದು. ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಸಾಧ್ಯವೋ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರದೇಶ ಶಾಂತಿಯಿಂದ ಇರಬೇಕು ಎಂಬುದೇ ನಮ್ಮ ಉದ್ದೇಶ ಎಂದರು.
ಪ್ರಚೋದನಾಕಾರಿ ಹೇಳಿಕೆ ಕೊಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲು ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದೇವೆ. ಈ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದರು. ಒಂದು ಕಾಲದಲ್ಲಿ ಈ ಜಿಲ್ಲೆಗೆ ಜನ ಸಂತೋಷದಿಂದ ಬರುತ್ತಿದ್ದರು. ಈ ಜಿಲ್ಲೆಯನ್ನು ಜನ ಮತ್ತೆ ಖುಷಿಯಿಂದ ಹುಡುಕಿಕೊಂಡು ಬರುವ ರೀತಿ ಮಾಡುತ್ತೇವೆ ಎಂದರು.
ಸದ್ಯಕ್ಕೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಇಲ್ಲ. ಹಾಗಾಗಿ ಎ.ಎನ್.ಎಫ್ ಅನ್ನು ಬರ್ಕಾಸ್ತು ಗೊಳಿಸುತ್ತೇವೆ. ಅದರಲ್ಲಿರುವ ಸಿಬ್ಬಂದಿಯನ್ನು ಕೋಮು ಹಿಂಸೆ ನಿಗ್ರಹ ಕಾರ್ಯಪಡೆಗೆ ಬಳಸಿಕೊಳ್ಳುತ್ತೇವೆ. ಕೆಲ ಸಿಬ್ಬಂದಿಯನ್ನು ಬೇರೆ ಕಡೆಯಿಂದ ನೇಮಿಸುತ್ತೇವೆ. ಐ.ಜಿ.ಪಿ ದರ್ಜೆಯ ಅಧಿಕಾರಿ ಇದರ ನೇತೃತ್ವ ವಹಿಸಲಿದ್ದಾರೆ. ಎರಡು ತಿಂಗಳ ಒಳಗೆ ಕಾರ್ಯರೂಪಕ್ಕೆ ಬರಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನೂನು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ ಆರ್.ಹಿತೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್, ಪಶ್ಚಿಮ ವಲಯ ಐ.ಜಿ.ಪಿ ಅಮಿತ್ ಶಾ, ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಅಮ.ಪಿ. ಭಾಗವಹಿಸಿದ್ದರು.