
ತುಮಕೂರು: ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರೆ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

j3tvkannada
ದೇವಸ್ಥಾನದಿಂದ ಹೊನ್ನಾದೇವಿಯನ್ನು ಬಸವನ ನಗಾರಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆ ತಂದು ರಥಕ್ಕೆ ಕೂರಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ರಥದ ನಾಲ್ಕು ಚಕ್ರ ಹಾಗೂ ಮುಂಭಾಗದಲ್ಲಿ ಪೂಜೆ ಸಲ್ಲಿಸಿ, ಉಗ್ಗಿಅನ್ನವನ್ನು ನೈವೇದ್ಯ ಮಾಡಿ ದೇವಿಗೆ ಮಂಗಳಾರತಿ ನಡೆಸಿದರು. ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ರಥ ಎಳೆದರು. ಹರಕೆ ಈಡೇರಿಸುವಂತೆ ಭಕ್ತಾಧಿಗಳು ಧವನ ಮತ್ತು ಬಾಳೆ ಹಣ್ಣನ್ನು ರಥಕ್ಕೆ ತೂರಿದರು. ಬಳಿಕ ಚಂದ್ರಮಂಡಲೋತ್ಸವ ನೆರವೇರಿತು.

j3tvkannada
ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು ಸರತಿ ಸಾಲಿನಲ್ಲಿ ಬಾಯಿಬೀಗ ಹಾಕಿಸಿಕೊಂಡರು. ಶನಿವಾರ ರಾತ್ರಿ ದೂಪದ ಸೇವೆ ಸಲ್ಲಿಸಿ, ಕಂಬ ವಿಸರ್ಜನೆ ಮಾಡಿದ ಮೇಲೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ. ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರು. ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಸಂಜೆವರೆಗೆ ಪ್ರಸಾದ ಸ್ವೀಕರಿಸಿದರು. ಹೊನ್ನಾದೇವಿಯ ಜಾತ್ರೆಯಲ್ಲಿ 33 ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಧರ್ಮದರ್ಶಿ ಡಿ.ಎಸ್.ಗಂಗಾಧರ ಗೌಡ, ಗುಡಿಗೌಡ ಡಿ.ಎನ್.ಸಿದ್ದೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.