
ಕೋಲಾರ: ನಾಗರೀಕತೆಯ ಆರಂಭದಿಂದಲೂ ಭೋವಿ ಸಮುದಾಯ ಹಲವಾರು ಕುಲಕಸುಬು ಮಾಡಿಕೊಂಡು ಬಂದಿದೆ. ಆದರೆ, ಅವುಗಳನ್ನು ಕೈಬಿಟ್ಟು ಇತಿಹಾಸವನ್ನು ಅಳಿಸಿ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬಾರದು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಭೋವಿ ಸಮುದಾಯದ ಹಲವಾರು ಕುಲ ಕಸುಬುಗಳನ್ನು ಕೈಬಿಡಲಾಗಿದೆ. ಪರಿಶಿಷ್ಟ ಜಾತಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ ಸಮಾಜದ ಕುಲಕಸುಬನ್ನು ಸರ್ಕಾರವೇ ನಾಶ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

j3tvkannada
ಸಮಸಮಾಜ ನಿರ್ಮಾಣ ಮಾಡಬೇಕಾದರೆ ಸಮುದಾಯಗಳ ದತ್ತಾಂಶದ ಅಗತ್ಯವಿದೆ. ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಕುಲಕಸುಬುಗಳ ಕೈಪಿಡಿ ರೂಪಿಸಿದೆ. ಪರಿಶಿಷ್ಟ ಜಾತಿಯ 101 ಜಾತಿಯಲ್ಲಿ 80 ಕುಲಕಸುಬು ಗುರುತಿಸಲಾಗಿದೆ. ಹಾವಾಡಿಗ, ಗೊಂಬೆ ಆಡಿಸುವವ, ಹಕ್ಕಿಪಿಕ್ಕಿ ವೃತ್ತಿಗಳನ್ನು ಗುರುತಿಸಿ ಭೋವಿ ಸಮುದಾಯದ ಹಲವು ಕಸುಬುಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಸಮೀಕ್ಷೆ ಆರಂಭಗೊಳ್ಳಲು 2 ದಿನಗಳಷ್ಟೇ ಉಳಿದಿವೆ. ತಪ್ಪು ಸರಿಪಡಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.