
ಶಿವಮೊಗ್ಗ: ವೈದ್ಯರು ರೋಗಿಗಳ ತಪಾಸಣೆ ಮಾಡಿದ ಬಳಿಕ ಕೇಸ್ ಶೀಟ್ನಲ್ಲಿನ ವಿಶಿಷ್ಟ ಆರೋಗ್ಯ ಗುರುತಿನ (ಯುಎಚ್ಐಡಿ) ಸಂಖ್ಯೆಯನ್ನು ಆನ್ಲೈನ್ ತಂತ್ರಾಂಶದಲ್ಲಿ ನಮೂದಿಸಲು ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ದಿನವೆಲ್ಲ ಸರತಿ ಸಾಲಿನಲ್ಲಿ ಕಾದು ನಿಂತರೂ ರೋಗಿಗಳಿಗೆ ಔಷಧಿ ಪಡೆಯಲು ಸಾಧ್ಯವಾಗುತ್ತಿಲ್ಲ.

j3tvkannada
ಸರ್ಕಾರದ ಹೊಸ ಆದೇಶದನ್ವಯ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳನ್ನು ತಪಾಸಣೆ ಮಾಡಿದ ವೈದ್ಯರೇ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೇಸ್ ಶೀಟ್ನಲ್ಲಿ ಬರೆಯುವ ಜೊತೆಗೆ ಕಂಪ್ಯೂಟರ್ನಲ್ಲೂ ದಾಖಲಿಸಬೇಕಿದೆ. ಔಷಧಿ ರಸೀದಿಯ ಯು.ಎಚ್.ಐ.ಡಿ ಸಂಖ್ಯೆ ಆನ್ಲೈನ್ನಲ್ಲಿ ನವೀಕೃತಗೊಂಡರೆ ಮಾತ್ರ ಔಷಧಿ ಕೇಂದ್ರದಿಂದ ರೋಗಿಗಳು ಔಷಧಿ ಪಡೆಯಲು ಸಾಧ್ಯ. ಔಷಧಿ ವಿತರಿಸುವ ಸಿಬ್ಬಂದಿ ಯು.ಎಚ್.ಐ.ಡಿ ಆಧಾರದ ಮೇಲೆ ರೋಗಿಗಳಿಗೆ ಔಷಧಿ ವಿತರಣೆ ಮಾಡುತ್ತಾರೆ. ಈ ಸಂಖ್ಯೆ ತಂತ್ರಾಂಶದಲ್ಲಿ ದಾಖಲಾಗದಿದ್ದರೆ ಔಷಧಿ ಕೇಂದ್ರದ ಬಳಿ ಸಾರ್ವಜನಿಕರು ಗಂಟೆಗಟ್ಟಲೆ ಕಾದರೂ ಔಷಧಿ ಪಡೆಯಲು ಸಾಧ್ಯವಿಲ್ಲ.
ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯಿಂದಲೂ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಪ್ರತಿ ನಿತ್ಯ 2000ಕ್ಕೂ ಹೆಚ್ಚು ಒಳ ಹಾಗೂ ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಯು.ಎಚ್.ಐ.ಡಿ ಸಂಖ್ಯೆ ಸರಿಯಾಗಿ ದಾಖಲಾಗದ ಕಾರಣ, ದೂರದೂರಿನಿಂದ ಬಂದ ರೋಗಿಗಳು ಸರತಿಯಲ್ಲಿ ಕಾದು ಸುಸ್ತಾಗಿ, ಔಷಧಿ ಖರೀದಿಗೆ ಖಾಸಗಿ ಮೆಡಿಕಲ್ ಸ್ಟೋರ್ಗಳ ಮೊರೆ ಹೋಗುತ್ತಿದ್ದಾರೆ.
ಔಷಧಿಗಳ ದಾಸ್ತಾನು ಮಾಹಿತಿ ಹಾಗೂ ಔಷಧಿಗಳ ಅನಗತ್ಯ ವ್ಯರ್ಥ ತಪ್ಪಿಸಲು ಸರ್ಕಾರ ಈ ನಿಯಮ ಜಾರಿಗೊಳಿಸಿದೆ. ಜಿಲ್ಲಾ ಆಸ್ಪತ್ರೆಯ ಔಷಧಿ ವಿತರಣಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಆಸ್ಪತ್ರೆಯಲ್ಲಿ 600 ರಿಂದ 700 ಬಗೆಯ ಔಷಧಿಗಳಿವೆ. ಆದ್ದರಿಂದ, ತಂತ್ರಾಂಶದಲ್ಲಿ ದಾಖಲಿಸುವಾಗ ವೈದ್ಯರೂ ಸಹ ಗೊಂದಲಕ್ಕೆ ಸಿಲುಕುತ್ತಾರೆ. ಇತ್ತೀಚೆಗೆ ಈ ನಿಯಮ ಜಾರಿಗೊಂಡಿದ್ದರಿಂದ ಇದು ಸರಿಯಾಗಲು ಸಮಯ ಹಿಡಿಯುತ್ತದೆ. ವಾರದ ಹಿಂದೆ ಕರುಳಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲಾಗಿತ್ತು. ಬುಧವಾರ ಮತ್ತೊಮ್ಮೆ ಬರಲು ವೈದ್ಯರು ಹೇಳಿದ್ದರು. ತಪಾಸಣೆ ಬಳಿಕ ಮಾತ್ರೆಗಳನ್ನು ನೀಡಿದ್ದಾರೆ. ಬೆಳಿಗ್ಗೆಯಿಂದ ಮೂರು ಬಾರಿ ಔಷಧಿ ಕೇಂದ್ರ ಬಳಿ ಸರತಿಯಲ್ಲಿ ಕಾದರೂ ನಿಮ್ಮ ವಿವರ ಆನ್ಲೈನ್ನಲ್ಲಿ ದಾಖಲಾಗಿಲ್ಲ. ಮತ್ತೊಮ್ಮೆ ವೈದ್ಯರನ್ನು ಕಂಡು ಬನ್ನಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಗಂಟೆಗೂ ಹೆಚ್ಚು ಕಾಲ ಸರತಿಯಲ್ಲಿ ನಿಂತಿದ್ದೇನೆ. ಪ್ರತಿ ಬಾರಿ ಹೋದಾಗಲೂ ಇದನ್ನೇ ಹೇಳುತ್ತಿದ್ದಾರೆ. ಇದರಿಂದ, ಬೇಸತ್ತು ಹೋಗಿದ್ದೇನೆ ಎಂದು ಶಿಕಾರಿಪುರದಿಂದ ಬಂದಿದ್ದ ರಮೇಶ್ ಅಳಲು ತೋಡಿಕೊಂಡರು.
ವಾರದಲ್ಲಿ ಮೂರು ದಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಮಸ್ಯೆ ಹೇಳತೀರದು. ದೂರದೂರಿನಿಂದ ಬಂದ ರೋಗಿಗಳು ತಲೆ ಬುಡವಿಲ್ಲದ ಈ ಹೊಸ ನಿಯಮದಿಂದ ಬೇಸತ್ತು ಹೋಗಿದ್ದಾರೆ. ಪ್ರತಿ ನಿತ್ಯ ಸರತಿಯಲ್ಲಿ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಕ್ರಮ ಆಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು. ಔಷಧಿ ವಿತರಣಾ ನಿಯಮ ಈ ಹಿಂದಿನ ರೀತಿಯಲ್ಲಿಯೇ ಜಾರಿಯಾಗಬೇಕು. ದೂರದ ಊರಿನಿಂದ ಬಂದು ಆಸ್ಪತ್ರೆ ಬಾಗಿಲು ಕಾಯಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಹೊರೆಯಾಗುವಂತಹ ಈ ರೀತಿಯ ನಿಯಮಗಳಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ರೋಗಿಗಳ ಸಂಬಂಧಿಗಳು ಆತಂಕ ವ್ಯಕ್ತಪಡಿಸುತ್ತಾರೆ..