
ಕೊಪ್ಪಳ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ವಿಂಡ್ ಟವರ್ ಕಂಪನಿಯ ಮಧ್ಯಸ್ಥಿಕೆ ವಹಿಸುವ ಗುತ್ತಿಗೆದಾರರು ಪೊಲೀಸರನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಂಪನಿಗಳ ಧೋರಣೆ ಮತ್ತು ನಿರ್ಲಕ್ಷ್ಯದಿಂದಾಗಿ ರೈತರು ಮತ್ತು ಸಾರ್ವಜನಿಕರು ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

j3tvkannada
ತಾಲ್ಲೂಕಿನ ನಲಜೇರಿ ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ವಿಂಡ್ ಟವರ್ ಕಂಪನಿಗಳಿಗೆ ಸೇರಿವೆ. ಅನೇಕ ಕಂಪನಿಗಳು ಪವನ ವಿದ್ಯುತ್ ಉತ್ಪಾದನೆ ಮಾಡಲು ವಿಂಡ್ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಗ್ರಿಡ್ಗೆ ಸಾಗಾಟ ಮಾಡಲು ವಿದ್ಯುತ್ ಲೈನ್ಗಳನ್ನು ಎಳೆದಿವೆ. ಆದರೆ ಅನೇಕ ಕಡೆ ತಂತಿಗಳಿಗೆ ಮರದ ಟೊಂಗೆಗಳು ತಾಕುತ್ತಿವೆ.
ಮರದ ಬಳಿ ಹೋಗುವ ರೈತರು ಮತ್ತು ಜಾನುವಾರುಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮರದ ಟೊಂಗೆಗಳನ್ನು ಕತ್ತರಿಸುವಂತೆ ಕಂಪನಿಗಳಿಗೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ರೈತರ ಜೊತೆ ವಿಂಡ್ ಕಂಪನಿಗಳ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಟವರ್ಗಳನ್ನು ಹಾಕುವ ಮೊದಲು ರೈತರಿಂದ ಭೂಮಿ ಖರೀದಿಸುವಾಗ ಹತ್ತಾರು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕಂಪನಿಗಳು ಭರವಸೆ ನೀಡಿದ್ದವು.
ಆದರೆ ನಂತರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮಿಷ್ಟಕ್ಕೆ ತಕ್ಕಂತೆ ವರ್ತಿಸುತ್ತವೆ. ಇದನ್ನು ಪ್ರಶ್ನಿಸಿದರೆ ರೈತರಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಿಸಲಾಗುತ್ತಿದೆ ಎಂದು ಗ್ರಾಮಸ್ಥ ಹಾಗೂ ಭೂಮಿ ಕಳೆದುಕೊಂಡ ಮಾಲೀಕ ದಿನೇಶ್ ಗೌಡ ಮಾಲಿಪಾಟೀಲ್ ಆರೋಪಿಸಿದರು.
ಇನ್ನು ಭೂಮಿ ಖರೀದಿ, ಭೂಮಿ ಲೀಸ್ನಲ್ಲಿ ಕೂಡ ಅನೇಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೆಲವರಿಗೆ ಪ್ರತಿ ಎಕರೆಗೆ 30 ಲಕ್ಷ ನೀಡಿದರೆ, ಇನ್ನು ಕೆಲವರಿಗೆ 15 ರಿಂದ 20 ಲಕ್ಷ ಮಾತ್ರ ನೀಡಲಾಗುತ್ತಿದೆ. ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಕೂಡ ಅನೇಕರಿಗೆ ಹಣ ಕೊಡುತ್ತೇವೆ ಎಂದು ಹೇಳಿ ಕಂಬ ಹಾಕಿದ ಮೇಲೆ ಹಣ ಕೊಡುತ್ತಿಲ್ಲ ಎಂದು ರೈತರು ದೂರಿದರು.