
ಉತ್ತರಕನ್ನಡ: ನಗರ, ಗ್ರಾಮೀಣ ಭಾಗದಲ್ಲಿರುವ ಕೆರೆಗಳ ನಿರ್ವಹಣೆಯ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪ ಆಗಾಗ ಜನರಿಂದ ಕೇಳಿಬರುವುದು ಹೆಚ್ಚು. ಜಿಲ್ಲೆಯ ವಿವಿಧೆಡೆಯಲ್ಲಿನ ಕೆರೆಗಳ ದುಸ್ಥಿತಿಯು ಈ ಅರೋಪ ಪುಷ್ಟಿಕರಿಸುತ್ತಿದೆ.

j3tvkannada
ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡಬೇಕಿದ್ದ ಕೆರೆಗಳೇ ಬಹುಪಾಲು ದುಸ್ಥಿತಿಯಲ್ಲಿವೆ. ಕಸ-ಕಡ್ಡಿಗಳನ್ನು ಎಸೆಯುವ ಮೂಲಕ ಕೆರೆಗಳನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಲಾಗುತ್ತಿದೆ. ಹಳಿಯಾಳ, ಮುಂಡಗೋಡ ಭಾಗದಲ್ಲಿ ಹತ್ತಾರು ಕೆರೆಗಳಿದ್ದರೂ ನಿರ್ವಹಣೆ ಇಲ್ಲದ ಪರಿಣಾಮ ಆ ಭಾಗದ ಬೇಸಿಗೆಯಲ್ಲಿ ನೀರಿಗೆ ಬರ ಉಂಟಾಗಿದೆ. ಕಾರವಾರದ ಮಾಜಾಳಿ ಸಮೀಪದ ದೇವತಿಶಿಟ್ಟಾ ಕೆರೆ, ಸದಾಶಿವಗಡದ ಕಾಕರತಳೆ ಕೆರೆಗಳು ನಿರ್ವಹಣೆ ಕಾಣದೆ ಉಪಯೋಗಕ್ಕೆ ಬಾರದಂತಿದೆ ಎಂಬುದು ಸ್ಥಳೀಯರ ದೂರು.
ಜಿಲ್ಲೆಯಲ್ಲಿನ ಕೆರೆಗಳನ್ನು ಸರಿಯಾಗಿ ಹೂಳೆತ್ತಿ, ನಿರ್ವಹಣೆ ಮಾಡಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗಲಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿಯೂ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಶಿರಸಿ ತಾಲ್ಲೂಕಿನ ಕಲಕರಡಿ, ಅಂಡಗಿ, ದಾಸನಕೊಪ್ಪ, ಬನವಾಸಿ, ಬೆಂಗಳೆ, ಉಂಚಳ್ಳಿ, ಕೆರೆಕೊಪ್ಪ, ಎಕ್ಕಂಬಿ ಭಾಗದಲ್ಲಿನ ಕೆರೆ ಹೂಳಿನಿಂದ ಕೂಡಿವೆ. ನಗರದ ಹಾಲುಹೊಂಡ ಕೆರೆ, ಕಲ್ಕುಣಿ ಕೆರೆಗಳು ತ್ಯಾಜ್ಯದಿಂದ ಕೂಡಿದೆ. ಕೋಟೆಕೆರೆಗೆ ಸಮೀಪದ ತೆರೆದ ಚರಂಡಿ ನೀರು ಸೇರುತ್ತಿದೆ.
ಯಲ್ಲಾಪುರ ಪಟ್ಟಣದಲ್ಲಿನ ಹೆಚ್ಚಿನ ಕೆರೆಗಳು ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ರವೀಂದ್ರ ನಗರದ ಕೆರೆ ಹಾಗೂ ಚಮಗಾರ ಕೆರೆಯ ಅತಿಕ್ರಮಣಕ್ಕೆ ತುತ್ತಾಗಿ ಕೆರೆಯ ಪ್ರದೇಶ ಕಡಿಮೆಯಾಗುತ್ತಿದೆ ಎಂಬುದು ಸ್ಥಳೀಯರ ದೂರು.
ಜೊಯಿಡಾ ತಾಲ್ಲೂಕು ಕೇಂದ್ರದಲ್ಲಿ ಸಿದ್ದೇಶ್ವರ ಮತ್ತು ಗಾವಡೆವಾಡಾ ಎರಡು ಕೆರೆಗಳು ಇದ್ದು ಎರಡೂ ಕೆರೆಗಳು ಹೂಳೆತ್ತದೆ ಪಾಳು ಬಿದ್ದಿವೆ. ಕೆರೆಯ ನೀರು ಜಾನುವಾರುಗಳ ಮೈ, ಜನರು ಬಟ್ಟೆ ತೊಳೆಯಲು ಮಾತ್ರ ಬಳಕೆ ಆಗುತ್ತಿದೆ. ಅಮೃತ ಸರೋವರ ಯೋಜನೆಯಡಿ ಗಾವಡೆವಾಡ ಕೆರೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿತ್ತು ಆದರೆ ಸ್ಥಳೀಯರ ವಿರೋಧದಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಜೊಯಿಡಾ ಗ್ರಾಮ ಪಂಚಾಯಿತಿ ಪಿ.ಡಿ.ಒ ಮೋಹನ ಡೋಂಬರ ಹೇಳುತ್ತಾರೆ. ದಶಕಗಳಿಂದ ತ್ಯಾಜ್ಯದ ತೊಟ್ಟಿಯಂತಾಗಿದ್ದ ಗೋಕರ್ಣದ ಗಾಯತ್ರಿ ತೀರ್ಥ, ಸ್ಥಳೀಯ ಯಂಗಸ್ಟಾರ್ ಕ್ಲಬ್ ಮತ್ತು ಗ್ರಾಮಸ್ಥರ ಶ್ರಮದಾನದಿಂದ ನೀರಿನ ಸೆಲೆಯಾಗಿ ಪರಿವರ್ತನೆಯಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಸುಂದರ ಕೆರೆ ನಿರ್ಮಾಣವಾಗಿದೆ. ಇದರಿಂದ ಸುತ್ತಮುತ್ತಲಿನ ಸುಮಾರು 50 ಕ್ಕೂ ಹೆಚ್ಚು ಬಾವಿಯಲ್ಲಿ ಅಂತರ್ಜಲ ಹೆಚ್ಚಾಗಿದೆ. ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಕೊರತೆ ಶಮನವಾಗಿದೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.
ಹಳಿಯಾಳ ಪಟ್ಟಣದ ವ್ಯಾಪ್ತಿಯಲ್ಲಿರುವ 11 ಕೆರೆಗಳ ಪೈಕಿ ಬಹುತೇಕ ಪುರಸಭೆಯಿಂದ ನಿರ್ವಹಣೆಯಾಗುತ್ತಿದ್ದರೆ, ಗೌಳಿಗಲ್ಲಿಯ ಕೆರೆ ಮಾತ್ರ ಕಲುಷಿತ ಸ್ಥಿತಿಯಲ್ಲಿದೆ. ಡೌವಗೇರಿ ಕೆರೆ ತೀರಾ ಕೆಸರಿನಿಂದ ಕೂಡಿದೆ. ಗೌಳಿಗಲ್ಲಿಯ ಕೆರೆಯಲ್ಲಿ ತ್ಯಾಜ್ಯಗಳನ್ನು ಎಸೆದಿದ್ದವರನ್ನು ಸಿಸಿಟಿವಿ ದೃಶರ್ಯಾವಳಿ ಆಧರಿಸಿ ಪತ್ತೆ ಹಚ್ಚಿ, ದಂಡ ವಿಧಿಸಲಾಗಿತ್ತು. ಆದರೂ ಕಸ ಎಸೆಯುವುದು ಮುಂದುವರಿದಿದೆ.

j3tvkannada
ಗೌಳಿಗಲ್ಲಿ ಕೆರೆಯ ಬಹುಭಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿದ್ದರೂ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಪುರಸಭೆ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.
ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲೊಂದು ಕಳೆದ ಎರಡು ವರ್ಷದ ಹಿಂದೆ ಅಚ್ಚುಕಟ್ಟಾದ ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಮಾಡಿದರೆ ಆ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು ಕಾಣಬಹುದು ಎನ್ನುತ್ತಾರೆ ಸ್ಥಳೀಯರು. ಕುಮಟಾ ತಾಲ್ಲೂಕಿನ ಬಾಡ, ಕಾಗಾಲ, ನಾಡಮಾಸ್ತೇರಿ ಹಾಗೂ ವಾಲಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆಯ ಹೂಳೆತ್ತುವ ಕಾರ್ಯವನ್ನು ಉದ್ಯೋಗ ಖಾತರಿ ಯೋಜನೆಯಡಿ ಕೈಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳ ನೀರು ಕುಡಿಯಲು ನೇರವಾಗಿ ಬಳಕೆ ಮಾಡುವುದಿಲ್ಲ. ಆದರೆ ಕೆರೆಗಳ ಹೂಳೆತ್ತಿದರೆ ಸುತ್ತಲಿನ ಕುಡಿಯುವ ನೀರಿನ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಎಲ್.ಭಟ್ಟ ತಿಳಿಸಿದರು.