
ಯಾದಗಿರಿ: ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಗೆ ಜನ ಸಂಕಷ್ಟ ಅನುಭವಿಸಿದರು.

j3tvkannada
ಬಸ್ ನಿಲ್ದಾಣದ ಹತ್ತಿರವಿರುವ ಅಂಗಡಿ, ಡಿ.ಡಿ.ಯು ಶಾಲೆಯ ಶೌಚಾಲಯದ ಮೇಲ್ಪಾವಣಿಯ ಪತ್ರಾಸ್ಗಳು ಹಾರಿ ಬಿದ್ದಿವೆ. ಸೈದಾಪುರ-ಯಾದಗಿರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದು, ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಬಿರುಗಾಳಿಗೆ ಹೊಲಗಳಲ್ಲಿನ ಕೆಲವು ವಿದ್ಯುತ್ ಕಂಬಗಳು ನೆಲಕ್ಕೆ ವಾಲಿವೆ. ಭಾರಿ ಪ್ರಮಾಣದ ಬಿರುಗಾಳಿಗೆ ಪಟ್ಟಣದ ತುಂಬೆಲ್ಲ ಧೂಳು ತುಂಬಿಕೊಂಡು ಮನೆ, ವಾಹನ, ಜನರ ಮುಖ ಕಾಣದಂಥ ವಾತಾವರಣ ನಿರ್ಮಾಣವಾಗಿತ್ತು. ಕೆಲ ಕಾಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಅಂಗಡಿ ಮಾಲೀಕರು ಅಂಗಡಿಗಳ ಬಾಗಿಲಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಬಸವೇಶ್ವರ ವೃತ್ತದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿನ ಬೀದಿ ಬದಿಯ ವ್ಯಾಪಾರಿಗಳು ಕೆಲ ಕಾಲ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ ಗಂಟು ಮೂಟೆ ಕಟ್ಟಿ ಬೇರೆ ಕಡೆ ಹೋಗಿ ಕುಳಿತುಕೊಂಡರು. ಬಸ್ ನಿಲ್ದಾಣದ ಹತ್ತಿರ ರಸ್ತೆ ಮೇಲೆ ಮಳೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.