
ಚಾಮರಾಜನಗರ: 2021, ಮೇ 2ರಂದು ಕೋವಿಡ್ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಘೋರ ಆಕ್ಸಿಜನ್ ದುರಂತದಲ್ಲಿ ದಾರುಣವಾಗಿ ಮೃತಪಟ್ಟ 34 ಜನರ ಕುಟುಂಬ ಸದಸ್ಯರ ಬೇಡಿಕೆಗಳಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮನ್ನಣೆ ಸಿಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ.

j3tvkannada
ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ತ ಕುಟುಂಬಗಳು ಸರ್ಕಾರದ ನಡೆಯಿಂದ ತೀವ್ರ ಮನನೊಂದಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿರೋಧ ತೋರಲು ಹಿಂದೆ ಕೆಪಿಸಿಸಿ ವತಿಯಿಂದ ನೀಡಲಾಗಿದ್ದ 1 ಲಕ್ಷ ಪರಿಹಾರ ಮೊತ್ತವನ್ನು ಮರಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸಂತ್ರಸ್ತರ ನಿರೀಕ್ಷೆ ಏನಿತ್ತು:
ಸಚಿವ ಸಂಪುಟ ಸಭೆಯಲ್ಲಿ ಮೃತರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಸಂತ್ರಸ್ತರಲ್ಲಿ ದಟ್ಟವಾಗಿತ್ತು. ಸಭೆ ನಡೆಯುವ ಪೂರ್ವಭಾವಿಯಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸಂತ್ರಸ್ತರು ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಸರ್ಕಾರ ಸ್ಪಂದನೆ ನೀಡದಿರುವುದು ಸಂತ್ರಸ್ತರಲ್ಲಿ ಅತೀವ ಬೇಸರ ತರಿಸಿದೆ.

j3tvkannada
ಪುಡಿಗಾಸು ಪರಿಹಾರ:
ಮೃತರ ಕುಟುಂಬಗಳಿಗೆ ಸರ್ಕಾರ ಇದುವರೆಗೆ ಸಮರ್ಪಕ ಪರಿಹಾರ ವಿತರಿಸಿಲ್ಲ. ಅವಘಡ ನಡೆದಾಗ ಕೆಪಿಸಿಸಿ ವತಿಯಿಂದ ತಲಾ 1 ಲಕ್ಷ, ಅಂದಿನ ಸರ್ಕಾರ ಕೆಲವರಿಗೆ 2 ಲಕ್ಷ, ಕೆಲವರಿಗೆ 3 ಲಕ್ಷ ಪರಿಹಾರ ವಿತರಿಸಿದೆಯಷ್ಟೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಮ್ಲಜನಕ ದೊರೆಯದೆ ಬಲಿಯಾದ ಜೀವಗಳ ಬೆಲೆ ಇಷ್ಟೆಯೇ ಎಂದು ಪ್ರಶ್ನಿಸುತ್ತಾರೆ. ಸಾಮಾಜಿಕ ಹೋರಾಟಗಾರ ಹಾಗೂ ನಗರಸಭೆ ಸದಸ್ಯ ಎಂ.ಮಹೇಶ್.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರಾಗಿದ್ದು, ಮನೆಗೆ ಆಧಾರಸ್ಥಂಬವಾಗಿದ್ದ ಪತಿ, ತಂದೆ, ಪುತ್ರನನ್ನು ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಹಿರಿಜೀವಗಳ ಆಸ್ಪತ್ರೆ ವೆಚ್ಚ ಭರಿಸಲಾಗದೆ, ಜೀವನ ನಿರ್ವಹಣೆ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕನಿಷ್ಠ ಕಾಳಜಿ ತೋರದಿರುವುದು ಖಂಡನೀಯ ಎನ್ನುತ್ತಾರೆ ಮಹೇಶ್.