
ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿ ಜಿಲ್ಲೆಯಲ್ಲಿ ಕುಟುಂತ್ತ ಸಾಗುತ್ತಿದೆ.

j3tvkannada
ಹರ್ ಫರ್ ಜಲ್ (ಮನೆ ಮನೆಗೆ ಗಂಗೆ) ಯೋಜನೆಯಡಿ 2020ರ ಅಕ್ಟೋಬರ್ನಲ್ಲಿ ನೀರು ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು. ಇಲ್ಲಿಯತನಕ ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ನಲ್ಲಿಯಲ್ಲಿ ಹರಿದಿಲ್ಲ. ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. 2024ರ ಮಾರ್ಚ್ ತಿಂಗಳಲ್ಲಿ 695 ಕಾಮಗಾರಿಗಳಲ್ಲಿ 384 ಪೂರ್ಣವಾಗಿತ್ತು. ಇದಾದ ಒಂದು ವರ್ಷದಲ್ಲಿ 97 ಕಡೆ ಪೂರ್ಣಗೊಳಿಸಲಾಗಿದೆ. ಇನ್ನೂ 214 ಕಾಮಗಾರಿ ಬಾಕಿ ಇದೆ. ಕೆಲ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ರಸ್ತೆಯ ಬದಿಯಲ್ಲಿ ಪೈಪ್ಲೈನ್ ಮಾಡಲಾಗಿದೆ. ಇನ್ನೂ ನಲ್ಲಿ ಸಂಪರ್ಕಕ್ಕಾಗಿ ಅಳವಡಿಸಲಾಗಿರುವ ಸಿಮೆಂಟ್ ಕಂಬಗಳು ಅವಶೇಷಗಳಂತೆ ನಿಂತಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ಹೋಗಿವೆ. ಯೋಜನೆ ಆರಂಭಕ್ಕೂ ಮುನ್ನವೇ ಈ ಸ್ಥಿತಿ ಇದೆ ಎಂದು ಗ್ರಾಮೀಣ ಭಾಗದ ಜನತೆ ಹೇಳುತ್ತಾರೆ.
ಏನಿದು ಯೋಜನೆ:
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ಶುದ್ಧವಾದ ನೀರನ್ನು ಈ ಯೋಜನೆ ಮುಖಾಂತರ ಪೂರೈಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ, ಉದ್ದೇಶ ಮಾತ್ರ ಈಡೇರುತ್ತಿಲ್ಲ. ಎಲ್ಲೆಡೆ ಜೆಜೆಎಂ ಕಾಮಗಾರಿ ಮಾಡಿದ್ದರೂ ಒಂದು ಹನಿ ನೀರು ಹರಿದಿಲ್ಲ. ಇದರಿಂದ ಯೋಜನೆ ಕಾಮಗಾರಿ ಮಾತ್ರ ಜನತೆಗೆ ಉಪಯೋಗವಾಗುತ್ತಿಲ್ಲ.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯ ಕಾಮಗಾರಿಯ ಉದ್ಘಾಟನೆಯು ಪ್ರಚಾರಕ್ಕೆ ಸೀಮಿತಗೊಂಡಿತು. ನಂತರ ಸ್ಥಳೀಯ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಗುತ್ತಿಗೆಯ ಕೆಲಸವನ್ನು ದಕ್ಕಿಸಿಕೊಂಡರು. ಕಳಪೆಮಟ್ಟದ ಕೆಲಸ ನಿರ್ವಿಸುತ್ತಿರುವ ಬಗ್ಗೆ ದೂರು ನೀಡಿದರೆ ಅದನ್ನು ಅಲ್ಲೆ ಚಿವುಟಿ ಹಾಕಿ, ದಾಖಲೆಯಲ್ಲಿ ಭರಪೂರವಾಗಿ ನೀರು ಹರಿದವು. ವಾಸ್ತವವಾಗಿ ಬೇಸಿಗೆ ಸಮಯದಲ್ಲಿ ಯೋಜನೆಯ ಇನ್ನೊಂದು ಮುಖ ಬಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗಾಗಿ ಪರದಾಟ ಸಾಮಾನ್ಯವಾಗಿದೆ. ಆದರೆ ಯೋಜನೆ ವೈಫಲ್ಯದ ಬಗ್ಗೆ ಒಬ್ಬರೂ ಚಕಾರ ಎತ್ತುವುದಿಲ್ಲದಿರುವುದು ನಮ್ಮ ದೌರ್ಬಲ್ಯವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಮುಖ್ಯ ರಸ್ತೆಯನ್ನು ಕೊರೆದು ಕಳಪೆಮಟ್ಟದ ಪೈಪು ಅಳವಡಿಸಿದರು. ರಸ್ತೆಯು ಹಾಳು ಮಾಡುವುದರ ಜೊತೆಗೆ ಕಳಪೆ ಕಾಮಗಾರಿಯಿಂದ ಮತ್ತಷ್ಟು ನಷ್ಟವನ್ನು ಸಾರ್ವಜನಿಕರು ಅನುಭವಿಸುವಂತೆ ಆಗಿದೆ.
