
ತುಮಕೂರು: ಪಟ್ಟಣದ ಬಸವೇಶ್ವರ ನಗರ ಮತ್ತು ಬ್ರಾಹ್ಮಣರ ಬೀದಿಯಲ್ಲಿ ಬೀಗ ಹಾಕಿದ್ದ ಮನೆಗಳ ಬೀಗ ಮುರಿದು ಕಳ್ಳರು ಕಳ್ಳತನ ಮಾಡಿದ್ದಾರೆ.

j3tvkannada
ಬಸವೇಶ್ವರ ನಗರದ ನಿವಾಸಿ ರವಿಕುಮಾರ್ ಕುಟುಂಬ ಸಹಿತ ಹುಣುಸೆಘಟ್ಟಕ್ಕೆ ತೆರಳಿದ್ದರು. ಮರುದಿನ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದಿದೆ. ಕಳ್ಳರು ಮನೆಯ ಕಿಟಿಕಿ ಗಾಜು ಒಡೆದು ಸರಳುಗಳನ್ನು ಕತ್ತರಿಸಿ ಮನೆಯೊಳಗೆ ನುಗ್ಗಿದ್ದಾರೆ. ಬೀರುವಿನಲ್ಲಿಟ್ಟಿದ್ದ 197 ಗ್ರಾಂ ತೂಕದ ವಿವಿಧ ಮಾದರಿ ಚಿನ್ನದ ಆಭರಣ ಮತ್ತು ₹30 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.
ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿರುವ ಫೋಟೊ ಗುಂಡಣ್ಣ ಅವರ ಮನೆಯಲೂ ಕಳ್ಳತನ ನಡೆದಿದೆ. ಇವರು ಸಹ ಮೂರ್ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ತೆರಳಿದ್ದರು. ಮನೆಗೆ ಬಂದು ನೋಡಿದಾಗ ಮನೆ ಮುಂದಿನ ಬಾಗಿಲನ್ನು ಹಾರೆಯಿಂದ ಮೀಟಿ ಲಾಕರ್ ಒಡೆದಿದ್ದಾರೆ. ಒಳನುಗ್ಗಿ ಮನೆಯೊಳಗಿದ್ದ ಎರಡು ಬೀರ್ಗಳನ್ನು ಒಡೆದಿದ್ದಾರೆ. ಬೀರುವಿನ ಒಳಗಿದ್ದ ಒಂದು ಕೆ.ಜಿ ಬೆಳ್ಳಿಯ ಪೂಜಾ ಸಾಮಗ್ರಿ ಮತ್ತು ₹50 ಸಾವಿರ ಹಣ ದೋಚಿದ್ದಾರೆ. ಎರಡು ಪ್ರತ್ಯೇಕ ಕಳವು ಘಟನೆಯಿಂದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.