
ಗದಗ: ತಾಲ್ಲೂಕಿನ ಬನಹಟ್ಟಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಮೂರು ದಿನಗಳಿಂದ ತೀವ್ರ ಪರದಾಡುವಂತಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ನರಗುಂದ ಪಟ್ಟಣಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 24/7 ಡಿಬಿಒಟಿ ನೀರಿನ ಪೂರೈಕೆ ಇದ್ದರೂ ಮೂರು ದಿನಗಳಿಂದ ನೀರು ಸ್ಥಗಿತಗೊಂಡಿದೆ. ಇದರಿಂದ ಜನರು ಬಳಸಲು, ಕುಡಿಯಲು ನೀರು ಎಲ್ಲಿಂದ ತರಬೇಕು? ಎಂದು ಸ್ಥಳೀಯ ಆಡಳಿತದ ವಿರುದ್ಧ ಬನಹಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

j3tvkannada
ಬನಹಟ್ಟಿಯಲ್ಲಿ ಪ್ರಸ್ತುತ ಡಿಬಿಒಟಿಯೇ ಆಧಾರ. ಅದು ಬಂದ್ ಆದರೆ ಜನರಿಗೆ ನೀರಿಲ್ಲ. ಕುಡಿಯುವ ನೀರಿನ ಕೆರೆ ಇದ್ದರೂ ಇಲ್ಲದಂತಾಗಿದೆ. ಡಿಬಿಒಟಿ ಬಂದ ಮೇಲಂತೂ ಕೆರೆಗಳು ಹಾಳಾಗಿ ಹೋಗಿವೆ. ಅದರಲ್ಲಿ ಈಗ ಅಲ್ಪ ಪ್ರಮಾಣದ ನೀರು ಇದ್ದರೂ ಬಳಸಲು ಯೋಗ್ಯವಿಲ್ಲದಂತಾಗಿದೆ. ಊರ ಹಳ್ಳದ ಬಳಿ ಕೊಳವೆಬಾವಿ ನೀರು ಬಳಸಲಿಕ್ಕೆ ಉಪಯೋಗಿಸಲಾಗುತ್ತಿತ್ತು. ಅದು ಈಗ ಅಷ್ಟಕ್ಕಷ್ಟೇ. ಇದರಿಂದ ಬನಹಟ್ಟಿ ಹಾಗೂ ಮೂಗನೂರ ಗ್ರಾಮದ ನಾಗರಿಕರು ಕುಡಿಯುವ ನೀರಿಗಾಗಿ ಹಾಗೂ ಬಳಸುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಡಿ.ಬಿ.ಒ.ಟಿ ಇದ್ದರೂ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಒಂದು ವಾರದಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈಚೆಗಂತೂ ಎರಡು ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನೀರಿನ ಸಂಗ್ರಹ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಯದಾಗಿದೆ’ ಎಂದು ಗ್ರಾಮಸ್ಥರು ಅಲವತ್ತುಕೊಂಡರು.