
ಹಾವೇರಿ: ಪಟ್ಟಣದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಂದು ಓಣಿಗಳಲ್ಲಿನ ಚರಂಡಿಗಳ ಸ್ವಚ್ಚತೆಯಾಗಬೇಕು. ಅಲ್ಲದೆ ಮೂಲ ಸೌಕರ್ಯಗಳನ್ನು ನೀಡಲು ಬದ್ಧರಾಗಿದ್ದೇವೆ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.

j3tvkannada
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಕೆಲವು ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಕೆಲವು ಓಣಿಗಳು ಸ್ವಚ್ಚವಾಗಿವೆ. ಇನ್ನೂ ಕೆಲವು ಬಡವರು ವಾಸಿಸುವ ಓಣಿಗಳಲ್ಲಿ ಚರಂಡಿಗಳು ಕೊಳಚೆ ನೀರು ಮುಂದೆ ಸಾಗುತ್ತಿಲ್ಲ, ಕಸದ ರಾಶಿ ತುಂಬಿ ಗಬ್ಬು ವಾಸನೆ ಹರಡಿದೆ. ಅದರಲ್ಲಿಯೇ ಬಡಜನತೆ ವಾಸವಾಗಿದ್ದಾರೆ. ಅದರಲ್ಲಿ ತಾರತಮ್ಯತೆ ಬೇಡ ಪ್ರತಿ ಓಣಿಗಳಲ್ಲಿ ಚರಂಡಿಗಳು ಸ್ವಚ್ಛವಾಗಬೇಕು. ಅಧಿಕಾರಿಗಳು ನಿಂತು ಸ್ವಚ್ಚತೆ ಮಾಡಿಸಬೇಕು ಎಂದರು.
ಪಟ್ಟಣದ ಜನಬೀಡು ಪ್ರದೇಶದಲ್ಲಿರುವ ವಿದ್ಯುತ್ ಕಂಬದಲ್ಲಿನ ಟಿ.ಸಿ.ಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಜನರ ಪ್ರಾಣಕ್ಕೆ ಕುತ್ತು ತರುವ ಟಿ.ಸಿ.ಗಳನ್ನು ಬೇರಡೆ ಹಾಕಬೇಕು. ಜನರ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಇಂತಹವುಗಳನ್ನು ಗಮನಿಸಬೇಕು. ಜನರಿಗೆ ತೊಂದರೆಯಾಗಬಾರದು. ತಾಲ್ಲೂಕಿನ ಎಲ್ಲ ಗ್ರಾಮದಲ್ಲಿನ ವಿದ್ಯುತ್ ಟಿ.ಸಿ.ಗಳನ್ನು ಪರಿಶೀಲನೆ ನಡೆಸಿ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಬೇಕು. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರಿಗೆ ಸನ್ಮಾನ: ಪಟ್ಟಣದ ಸ್ವಚ್ಚತೆಯಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿರುವ ರವಿ ಮಾದರ, ಶಿವು ಕಟ್ಟಿಮನಿ, ಶೇಖಪ್ಪ ಮಾದರ, ನಿಂಬಣ್ಣ ಮಾದರ, ನಾಗಪ್ಪ ಮಾದರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಸೇರಿದಂತೆ ಹಲವು ಪೌರಕಾಮಿರ್ಕರನ್ನು ಸನ್ಮಾನಿಸಿ ಗೌರವಿಸಿದರು. ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ ಸೇರಿದಂತೆ ಎಲ್ಲ ಸದಸ್ಯರು, ಪುರಸಭೆ ಸಿಬ್ಬಂದಿ, ಮುಖಂಡರು ಇದ್ದರು.