
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ಕೃಷಿ ಪಂಪ್ಸೆಟ್ ಆನ್ ಆಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಭೀತಿಯಲ್ಲಿ ರೈತರಿದ್ದಾರೆ.

j3tvkannada
ತಾಲ್ಲೂಕಿನ ಈಚನಾಳ 33 ಕೆವಿ ಸ್ಟೇಶನ್ ವ್ಯಾಪ್ತಿಯಲ್ಲಿರುವ ಕೃಷ್ಣಾ ತೀರದ ಗ್ರಾಮಗಳಾದ ಹಂಚಿನಾಳ, ಜಲದುರ್ಗ, ಶೀಲಹಳ್ಳಿ, ಯಳಗುಂದಿ, ಕಡದರಗಡ್ಡಿ, ಯರಗೋಡಿ ಸೇರಿ ಇತರೆ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ವೋಲ್ವೇಜ್ ವಿದ್ಯುತ್ ಸಮಸ್ಯೆಯಿಂದ ರೈತರು ನಾನಾ ಸಂಕಷ್ಟು ಎದುರಿಸುವಂತಾಗಿದೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ವಿದ್ಯುತ್ ಬಳಕೆ ಇಮ್ಮಡಿ ಆಗುತ್ತಿದೆ. ಕೃಷಿ ಪಂಪ್ಸೆಟ್ಗೆ 7 ತಾಸು ವಿದ್ಯುತ್ ಪೂರೈಕೆ ಎಂಬುದು ಈ ಗ್ರಾಮಗಳಿಗೆ ನೆಪಮಾತ್ರವಾಗಿದೆ. ಒಂದು ವೇಳೆ 7 ತಾಸು ವಿದ್ಯುತ್ ಕೊಟ್ಟರೂ ಅದು ವೋಲ್ವೇಜ್ ಇರುವುದಿಲ್ಲ. ಬಹುತೇಕ ಕೃಷಿ ಪಂಪ್ ಸೆಟ್ ಆನ್ ಆಗದಂತಹ ದುರಾವಸ್ಥೆಗೆ ತಲುಪಿವೆ. ರೈತರು ಹಗಲು, ರಾತ್ರಿ ಪಂಪ್ಸೆಟ್ ಆನ್ ಮಾಡಲು ಹೆಣಗಾಡುವಂತಾಗಿದ್ದು, ಕೃಷಿ ಪಂಪ್ ಸೆಟ್ಗೆ ವೋಲ್ವೇಜ್ ವಿದ್ಯುತ್ ಇಲ್ಲದಿರುವುದು ರೈತರಿಗೆ ತುಂಬಾ ಸಮಸ್ಯೆ ಉಂಟು ಮಾಡಿದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಿದೆ.
ವೋಲ್ವೇಜ್ ಇಲ್ಲದ ಕಾರಣ ಪಂಪ್ಸೆಟ್ ಸುಟ್ಟು ಹೋಗುತ್ತಿದ್ದು, ದುರಸ್ತಿಗೆ ರೈತರು ಸಾವಿರಾರು ಖರ್ಚು ಮಾಡಬೇಕಿದೆ. ಇನ್ನೊಂದೆಡೆ ನೀರಿಲ್ಲದೆ ಕೃಷಿ ಜಮೀನಲ್ಲಿರುವ ಬೆಳೆಗಳಾದ ದಾಳಿಂಬೆ, ಪಪ್ಪಾಯಿ, ಶೇಂಗಾ, ಇತರೆ ತರಕಾರಿಗಳು ಬೆಳೆಗಳು ಒಣಗುವಂತಾಗಿದೆ. ಈ ಗ್ರಾಮಗಳಲ್ಲಿ ಯಾವುದೇ ನೀರಾವರಿ ಯೋಜನೆಗಳು ಇಲ್ಲ ಇದರಿಂದ ನದಿ ತಟದಲ್ಲಿ ಪಂಪ್ಸೆಟ್ ಮೂಲಕ ಭೂಮಿಗೆ ನೀರು ಹರಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ನೀರು ಇದೆ. ಆದರೆ ಭೂಮಿಗೆ ನೀರು ಹರಿಸಿಕೊಳ್ಳಲು ವಿದ್ಯುತ್ ಬರವಿದೆ.
110 ಕೆವಿ ಸ್ಟೇಶನ್ ಮಾಡಿ:– ಈಚನಾಳ ಗ್ರಾಮದಲ್ಲಿರುವ 33 ಕೆವಿ ಸ್ಟೇಶನ್ಗೆ ವಿದ್ಯುತ್ ಬಳಕೆ ಲೋಡ್ ಹೆಚ್ಚಾಗಿದ್ದರಿಂದ ಕೃಷಿಗೆ ವೋಲ್ವೇಜ್ ಕಡಿಮೆಯಾಗುತ್ತಿದೆ ಅತ್ತ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈಚನಾಳ 33 ಕೆವಿಯನ್ನು 110 ಕೆವಿ ಸ್ಟೇಶನ್ಗೆ ಉನ್ನತಿಕರಿಸುವಂತೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದರೂ ಇನ್ನೂ ಮಂಜೂರಾತಿ ಆಗುತ್ತಿಲ್ಲ. ಇದರಿಂದ 33 ಕೆವಿ ಸ್ಟೇಶನ್ಗೆ ಲೋಡ್ ಅಧಿಕವಾಗಿರುವುದು ನಾನಾ ತಾಪತ್ರಯಗಳಿಗೆ ಕಾರಣವಾಗಿದೆ. ಈ ಸಮಸ್ಯೆ ಪರಿಹಾರ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. 110 ಕೆವಿ ಸ್ಟೇಶನ್ ಮಂಜೂರಾತಿಗೆ ಚುನಾಯಿತ ಪ್ರತಿನಿಧಿಗಳ ಇಚ್ಛಾಸಕ್ತಿಯೂ ಅಗತ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.