
ಗುಂಡ್ಲುಪೇಟೆ: ಭೂಮಿ ಜೀವ ಸಂಕುಲ ಹೊಂದಿರುವ ಏಕೈಕ ಗ್ರಹ. ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಭೂಮಿ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

j3tvkannada
ಮನುಷ್ಯನ ಜ್ಞಾನ ಬೆಳೆದಂತೆಲ್ಲ ದುರಾಸೆ ಹೆಚ್ಚಿದೆ. ಮಾನವನ ಅತಿಯಾಸೆಯಿಂದ ವಾತಾವರಣ ಕಲುಷಿತವಾಗುತ್ತಿದೆ. ಏರುತ್ತಿರುವ ಜಾಗತಿಕ ತಾಪಮಾನ, ಪರಿಸರ ನಾಶದಿಂದ ಭೂಮಿ ನಿರಂತರವಾಗಿ ಹದೆಗೆಡುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ವಿಶ್ವ ಭೂದಿನ ಆಚರಣೆ ಮಾಡಲಾಗುತ್ತಿದೆ ಎಂದರು.
1970ರಲ್ಲಿ ಪ್ರಾರಂಭವಾದ ವಿಶ್ವ ಭೂದಿನ ಆಚರಣೆ ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಭೂಮಿಯ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದು, ಮಾತೃ ಸ್ಥಾನ ನೀಡಿದ್ದೇವೆ. ಇತ್ತೀಚೆಗೆ ಕೋವಿಡ್ ಸೇರಿ ಅನೇಕ ಸಾಂಕ್ರಾಮಿಕ ರೋಗಗಳು ಜಾಗತಿಕವಾಗಿ ಮನುಷ್ಯನನ್ನು ಕಾಡುತ್ತಿದೆ. ಈ ಕಾರಣದಿಂದಾಗಿ ನಮ್ಮ ಸುತ್ತಮುತ್ತಲಿನ ಮಣ್ಣು, ನೀರು ಮತ್ತು ಗಾಳಿ ಸಂರಕ್ಷಣೆ ಮಾಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮಲ್ಲರ ಕರ್ತವ್ಯ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜಿ.ಶಿವಕುಮಾರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಕಾರ್ಯದರ್ಶಿ ಬೀರೇಗೌಡ, ವಕೀಲರಾದ ನಾಗೇಂದ್ರ, ಯೋಗೇಶ್, ಪುಟ್ಟಸ್ವಾಮಿ ಹಾಜರಿದ್ದರು