
ಕರ್ನಾಟಕ:ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಯಿತು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ರಭಸದ ಗಾಳಿ, ಮಳೆಗೆ ಶೆಡ್ನ ಪತ್ರಾಸ್ (ತಗಡು) ಹಾರಿ ಬಂದು ಕುತ್ತಿಗೆಗೆ ಬಡಿದು ಸುನೀತಾ ಕಾಂತೇಶ ಲಮಾಣಿ (34) ಮೃತಪಟ್ಟಿದ್ದಾರೆ.ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಬಿರುಗಾಳಿ, ಮಳೆಗೆ ಲೋಕೋಪಯೋಗಿ ಇಲಾಖೆ ಕಾಂಪೌಂಡ್ ಕುಸಿದು ಮಹಿಬೂಬಸಾಬ್ ತಾಳಿಕೋಟಿ (35) ಮೃತಪಟ್ಟಿದ್ದಾರೆ.ಹುನಗುಂದ ತಾಲ್ಲೂಕಿನ ಹೊನ್ನರಹಳ್ಳಿಯಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ.

j3tvkannada
ಬೆಳಗಾವಿ ಜಿಲ್ಲೆ ಸತ್ತಿಗೇರಿ ಸಮೀಪದ ಗುಡುಮಕೇರಿ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಛಾವಣಿಯ ತಗಡಿನ ಶೀಟುಗಳು ಹಾರಿ ಹೋಗಿದೆ. ಆಲಿಕಲ್ಲು ಮಳೆ ಸುರಿದಿದ್ದು, ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಯಿತು. ಬಾಗಲಕೋಟೆ ಜಿಲ್ಲೆ ಹುನಗುಂದ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದೆ. ಗಾಳಿ ಮಳೆ ಆರ್ಭಟಕ್ಕೆ 10ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ವಿವಿಧೆಡೆ ಬಾಳೆ ಫಸಲು ನಾಶವಾಗಿದೆ. ಅರಳಿಹಳ್ಳಿ ತಾಂಡಾ, ಶಂಕರಸಿಂಗ್ ಕ್ಯಾಂಪ್, ನೆಲ್ಲೂಡಿ ಕೊಟ್ಟಾಲು ಭಾಗದಲ್ಲಿ ಜಿ-9 ತಳಿ ಬಾಳೆ ಫಸಲು ನೆಲಕ್ಕೆ ಕಚ್ಚಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರತ್ನಪ್ರಿಯಾ ಎರಗಲ್ ತಿಳಿಸಿದ್ದಾರೆ.