
ಬಳ್ಳಾರಿ(ಮರಿಯಮ್ಮನಹಳ್ಳಿ): ಸಾರ್ವಜನಿಕರಿಂದ ಬಂದಿರುವ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಖಾಜಾ ಮೊಹಿದ್ದೀನ್ ಅವರನ್ನು ಸೋಮವಾರ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

j3tvkannada
ಕೃತಕ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯ ಮೂಲ ಮಾಲೀಕರಿಗೆ ತಿಳಿಯದಂತೆ ಖಾತೆ ಮಾಡಿರುವುದು, ಪುರಾತತ್ವ ಇಲಾಖೆಯ ಬಾವಿ ಜಾಗಗಳನ್ನು ಮುಚ್ಚಿಸಿರುವ ಕುರಿತು ಡಿಮಾಂಡ್ ರಿಜಿಸ್ಟರ್ ಹಾಗೂ ಕೆ.ಎಂ.ಎಫ್ 24 ಡಿಮಾಂಡ್ ರಿಜಿಸ್ಟರ್ ಮಾತ್ರ ಹಾಜರುಪಡಿಸಿದ್ದು, ಸದರಿ ಜಾಗಗಳಿಗೆ ಸಂಬಂಧಿಸಿದಂತೆ ಯಾವುದೇ ಮೂಲ ದಾಖಲಾತಿಗಳನ್ನು ಹಾಜರು ಪಡಿಸಿರುವುದಿಲ್ಲ. ಅಲ್ಲದೆ ಹಿಂಬರಹ ಕೊಡುತ್ತಿದ್ದ ಹಲವಾರು ಸರ್ಕಾರಿ ಆಸ್ತಿಗಳಿಗೆ ಕೃತಕ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಿ ನಿಯಮಾನುಸಾರ ಕ್ರಮವಹಿಸಿದ್ದರೂ ಅಧ್ಯಕ್ಷರ ಅನುಮೋದನೆ ಪಡೆದಿಲ್ಲ. ಜೊತೆಗೆ ಅನಧಿಕೃತ ಬಡಾವಣೆಗಳಿಗೆ ಅಭಿವೃದ್ಧಿಗೊಳಿಸದಿದ್ದರೂ ಸಹ ಫಾರಂ-3 ಅನ್ನು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಮುಖ್ಯಾಧಿಕಾರಿ ಖಾಜಾ ಮೊಹಿದ್ದೀನ್ ಅವರ ವಿರುದ್ಧದ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಅಮಾನತ್ತಿನಲ್ಲಿಯೇ ಇವರ ಹುದ್ದೆಯ ಸ್ಥಾನವನ್ನು ಮುಂದಿನ ಆದೇಶದವರೆಗೆ ಕುರೇಕುಪ್ಪ ಪುರಸಭೆಯಲ್ಲಿನ ಕಚೇರಿ ವ್ಯವಸ್ಥಾಪಕರ ಹುದ್ದೆಗೆ ಬದಲಾಯಿಸಿ ಆದೇಶಿಸಿದ್ದಾರೆ.