
ಯಾದಗಿರಿ: ಸಮಾಜದಲ್ಲಿ ಸಹಬಾಳ್ವೆಯ ಜೀವನಕ್ಕೆ ಮಠ-ಮಂದಿರಗಳು ಅತ್ಯವಶ್ಯಕ. ಮಠಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಬಡ ಜನರಿಗೆ ಅನುಕೂಲವಾಗುವುದರ ಜತೆಗೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು

j3tvkannada
ನಗನೂರ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದ 178ನೇ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ನಡೆದ 23ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಐತಿಹಾಸಿಕ ನಗನೂರಿನ ಮಠವು ಪ್ರತಿವರ್ಷ ಸರಳ ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ. ಧರ್ಮ ಜಾಗೃತಿಯ ಕೆಲಸಗಳು ಮಠಮಾನ್ಯಗಳಿಂದ ನಿರಂತರ ನಡೆಯಬೇಕು ಎಂದು ಮನವಿ ಮಾಡಿದರು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ 61 ಜೋಡಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.
ಶರಣಬಸವೇಶ್ವರ ದಾಸೋಹ ಮಠದ 178ನೇ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ(ಏ.23) ರಥೋತ್ಸವ ಜರುಗಲಿದೆ. ನಂತರ ಬೃಹತ್ ದನಗಳ ಜಾತ್ರೆಗೆ ಚಾಲನೆ ನೀಡಲಿದ್ದು, ರಾಜ್ಯದ ನಾನಾ ಭಾಗಗಳಿಂದ ಬರುವ ರಾಸುಗಳಿಗೆ ಗ್ರಾಮಸ್ಥರ ಸಹಕಾರದಿಂದ ನೀರಿನ ವ್ಯವಸ್ಥೆ ಜಾಗದ ವ್ಯವಸ್ಥೆ ಕಲ್ಪಿಸಲಾಗಿದೆ. ಮಠದಲ್ಲಿ ನಿತ್ಯ ದಾಸೋಹ ವ್ಯವಸ್ಥೆ ಇದ್ದು ಬೇಸಿಗೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಶ್ರಮಿಸಲಾಗುತ್ತಿದೆ ಎಂದು ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣ ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ, ನಮ್ಮ ನಗನೂರ ದಾಸೋಹ ಮಠ ಅನೇಕ ವರ್ಷಗಳಿಂದ ಧರ್ಮ ಜಾಗೃತಿಯ ಜತೆಗೆ ಸಾಮೂಹಿಕ ವಿವಾಹ ನಡೆಸುತ್ತಿದೆ. ಇಲ್ಲಿನ ಪೀಠಾಧಿಪತಿ ಶರಣಪ್ಪ ಶರಣರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ಎಂದರು.