
ತುಮಕೂರು: ಗುಬ್ಬಿತಾಲ್ಲೂಕಿನ ಕಡಬಾ ಹೋಬಳಿಯ ಗಂಗಸಂದ್ರ ಹಾಗೂ ಕಾಡಶೆಟ್ಟಿಹಳ್ಳಿ ಗ್ರಾಮಗಳ ಮಧ್ಯೆ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಅಧಿಕಾರಿಗಳು, ಗುತ್ತಿಗೆದಾರರು ಮಂಗಳವಾರ ಮುಂದಾದರು. ಗ್ರಾಮಸ್ಥರು ಪ್ರತಿಭಟಿಸಿ ಕಾಮಗಾರಿ ತಡೆದರು.

j3tvkannada
ಯಾವುದೇ ಕಾಮಗಾರಿ ಮಾಡುವುದಿಲ್ಲ. ಕೇವಲ ಸರ್ವೆ ಮಾಡುತ್ತೇವೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು. ಆದರೆ ತಾಲ್ಲೂಕು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಅಕ್ಷೇಪ ವ್ಯಕ್ತಪಡಿಸಿದರು.
ಹೊಸದಾಗಿ ರೈತರ ಜಮೀನುಗಳಲ್ಲಿ ನಾಲೆ ತೆಗೆಯದೆ ಪ್ರಸ್ತುತ ಇರುವ ಹೇಮಾವತಿ ಉಪನಾಲೆಯ ಕೆಳಭಾಗದಲ್ಲಿ ಪೈಪ್ ಹಾಕಿ ಮೇಲ್ಬಾಗದಲ್ಲಿ ಮಾಮೂಲಿನಂತೆ ನೀರು ಹರಿಯುವಂತೆ ಮಾಡುತ್ತೇವೆ. ಇದಕ್ಕೆ ಯಾರನ್ನು ಕೇಳುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಗ್ರಾಮಸ್ಥರು ಸಿಟ್ಟಾದರು.
ಕಾಲುವೆ ನಿರ್ಮಿಸಲು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಯಾವುದೇ ಕ್ರಿಯಾಯೋಜನೆ ರೂಪಿಸದೆ ಅಕ್ರಮವಾಗಿ ರೈತರ ಜಮೀನುಗಳಲ್ಲಿ ಪೈಪ್ ಅಳವಡಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು. ಕಾಮಗಾರಿ ವಿಚಾರ ಸರ್ಕಾರದ ಅಧಿಕಾರಿಗಳು ಹಾಗೂ ರೈತರಿಗೆ ಸಂಬಂಧಪಟ್ಟದ್ದಾಗಿದೆ. ಪೊಲೀಸರು ಯಾವುದೇ ಕಾರಣಕ್ಕೂ ಮಧ್ಯೆ ಪ್ರವೇಶಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ನಿಯಮಾವಳಿಗಳನ್ನು ಅನುಸರಿಸದಿದ್ದಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಗುರುವಾರ ಸಂಬಂಧಿಸಿದ ಕಂದಾಯ ಮತ್ತು ಸರ್ವೆ ಅಧಿಕಾರಿಗಳ ಜೊತೆ ಬರುವುದಾಗಿ ತಿಳಿಸಿ ಅಧಿಕಾರಿಗಳು ವಾಪಸಾದರು. ತಕ್ಷಣ ಸಭೆ ನಡೆಸಿದ ಸುತ್ತಮುತ್ತಲ ಗ್ರಾಮಸ್ಥರು ನಿಯಮಾವಳಿಗಳನ್ನು ಅನುಸರಿಸದೆ ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಕೆನಾಲ್ ಕಾಮಗಾರಿಗೆ ಮುಂದಾದಲ್ಲಿ ಯಾವುದೇ ಕಾರಣಕ್ಕೂ ಬಿಡಬಾರದು ಎಂದು ನಿರ್ಣಯ ಕೈಗೊಂಡರು.