
ಗದಗ: ಗ್ರಾಮದ ಮುಖ್ಯ ಚರಂಡಿ ಕಾಮಗಾರಿ ಕೈಗೊಳ್ಳದ ಕಾರಣ ಕೊಳಚೆ ನೀರು ನಿಂತು ದುರ್ನಾತಕ್ಕೆ ಕಾರಣವಾಗಿದೆ. ಕೆಲವು ಭಾಗಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದೇ ಸಿಸಿ ರಸ್ತೆ ಹಾಳಾಗಿದೆ. ಇದರಿಂದ ನಿತ್ಯವೂ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದ ಟಿಪ್ಪು ವೃತ್ತದ ಹತ್ತಿರ ರಾಜ ಕಾಲುವೆ ಕಾಮಗಾರಿ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೇ ಹಾಗೇ ಸಂಗ್ರಹವಾಗಿ ದುರ್ನಾತಕ್ಕೆ ಕಾರಣವಾಗಿದೆ. ಇನ್ನು ಗ್ರಾಮದ ಬಹುತೇಕ ವಾರ್ಡ್ಗಳಲ್ಲಿ ಸಿಸಿ ರಸ್ತೆಗಳು ಹಾಳಾಗಿದ್ದು ಇಕ್ಕಟ್ಟಾದ ಸಂದಿಗಳಲ್ಲಿ ಬೈಕ್ ಸಂಚಾರ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ವೃದ್ಧರು, ಮಕ್ಕಳು ನಡೆದಾಡುವುದೇ ಕಷ್ಟವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

j3tvkannada
ಹಿಂದೆ ಜೆ.ಜೆ.ಎಂ ಕಾಮಗಾರಿಗಾಗಿ ರಸ್ತೆ ಮಧ್ಯೆ ಪೈಪ್ ಅಳವಡಿಕೆಗೆ ತೆಗೆದ ತಗ್ಗುಗಳಲ್ಲಿ ಮನೆಗಳ ಮೋರಿ ನೀರು ಹರಿಯುತ್ತಿದೆ. ಹೀಗಾಗಿ ಮತ್ತಷ್ಟು ಗಲೀಜು ಉಂಟಾಗಿದೆ. ತಗ್ಗುಗಳು ಬಿದ್ದು ತೊಂದರೆ ಆಗುತ್ತಿದೆ. ಗುಂಡಿ ಮುಚ್ಚುವಂತೆ ಹಲವು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನಾವಗಿಲ್ಲ ಎಂದು ಜೈ ಕರ್ನಾಟಕ ಸಂಘಟನೆಯ ಗದಗ ತಾಲ್ಲೂಕು ಘಟಕದ ಉಪಾಧ್ಯಕ್ಷ ಇಮಾಮ್ ಸಾಬ ಮಟ್ಟೂರ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಹತ್ತಿರ, ಸರ್ಕಾರಿ ಶಾಲೆ ಎದುರು ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ.
ಪರಿಣಾಮವಾಗಿ ಇಲ್ಲಿನ ನೂರಾರು ಮನೆಗಳ ಕೊಳಚೆ ನೀರು ಡಾಂಬರ್ ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಸತತವಾಗಿ ಕೊಳಚೆ ನೀರು ಹರಿಯುವುದರಿಂದ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ಅಡ್ರಕಟ್ಟೆಯವರ ಪ್ಲಾಟ್ನಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿನ ಚರಂಡಿ ಕಾಮಗಾರಿ ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಗ್ರಾಮದಲ್ಲಿನ ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಕೂಡಲೇ ಸಿಸಿ ರಸ್ತೆ ದುರಸ್ತಿ, ಚರಂಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.