
ಬೆಳಗಾವಿ: ನಗರದ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ವಚನದರ್ಶನ, ʼಮಿಥ್ಯ vs ಸತ್ಯ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ಒಳ ಪಂಗಡಗಳ ಜಗಳ ಬಿಟ್ಟು ಲಿಂಗಾಯತರು ಒಂದಾಗಬೇಕು. ತಮ್ಮ ಮೇಲೆ ನಡೆದಿರುವ ಅನ್ಯಾಯ ಹಿಮ್ಮೆಟ್ಟಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ 1.35 ಕೋಟಿ ಇದ್ದರೂ ತಪ್ಪು ಮಾಹಿತಿ ನೀಡಲಾಗುತ್ತಿದೆ. ರಾಜಕೀಯ ಪಕ್ಷಗಳಿಂದ ಲಿಂಗಾಯತ ಸಮಾಜ ಛಿದ್ರಗೊಂಡಿದೆ ಎಂದರು.

j3tvkannada
ವಚನಗಳು ಭಾರತದ ಪರಂಪರೆಗೆ ವಿರುದ್ಧ ಎಂದು ಬಿಂಬಿಸುವ ಯತ್ನ ನಡೆಯಿತು. ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದ ಲಿಂಗಾಯತರಿಗೆ ಬೇರೆಯವರು ರಾಷ್ಟ್ರೀಯತೆ ಕಲಿಸುವ ಅಗತ್ಯವಿಲ್ಲ ಎಂದು ಹೇಳಿದರು.
ದೋಷಗಳನ್ನು ಮೊದಲು ತಿಳಿಸಲಿ
ಗ್ರಂಥ ಬಿಡುಗಡೆಗೊಳಿಸಿದ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ‘ಬಸವಾದಿ ಶಿವಶರಣರ ಆಶಯಕ್ಕೆ ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗುತ್ತಿದೆ. ಪುನಃ ಪುರೋಹಿತಶಾಹಿ ವ್ಯವಸ್ಥೆ ಜಾರಿಗೆ ತರಲು ಯತ್ನಿಸಲಾಗಿದೆ. ಬಸವಣ್ಣನವರ ಕ್ರಾಂತಿ ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಈ ಗ್ರಂಥದಲ್ಲಿನ ದೋಷಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿಯೇ ‘ವಚನದರ್ಶನ ಮಿಥ್ಯ vs ಸತ್ಯ’ ಗ್ರಂಥ ಲೋಕಾರ್ಪಣೆ ಮಾಡಿದ್ದೇವೆ’ ಎಂದರು.
‘ಲಿಂಗಾಯತ ಧರ್ಮವೇ ಸತ್ಯ’
ಕಾರ್ಯಕ್ರಮ ಉದ್ಘಾಟಿಸಿದ ಹಂದಿಗುಂದದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ‘ವಚನದರ್ಶನ’ ಗ್ರಂಥವೇ ಮಿಥ್ಯ. ಬಸವಣ್ಣನವರ ಲಿಂಗಾಯತ ಧರ್ಮವೇ ಸತ್ಯ. ಶರಣ ಪರಂಪರೆಯ ವಾರಸುದಾರರು ವಿಭೂತಿ ಬಿಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಓಡಾಡುತ್ತಿರುವುದು ನೋವಿನ ಸಂಗತಿ ಎಂದರು. ‘ಗುರು-ವಿರಕ್ತರುʼ ಒಂದಾಗಬೇಕು ಎಂದರೆ ಅದು ಹೇಗೆ ಸಾಧ್ಯ? ಅವರು ಏನು ಹೇಳುತ್ತಾರೆಯೋ ಹೇಳಲಿ. ನಮ್ಮ ವಿಚಾರವನ್ನು ನಾವು ಸ್ಪಷ್ಟಪಡಿಸುವುದು ಮುಖ್ಯ ಎಂದರು. ನೀವು ವೀರಶೈವರೋ ಅಥವಾ ಲಿಂಗಾಯಿತರೋ ಎಂದು ಸ್ಪಷ್ಟವಾಗಿ ಹೇಳಿ. ವೀರಶೈವರಾದರೆ ಅಲ್ಲಿಯೇ ಇರಿ. ಲಿಂಗಾಯತರಾದರೆ ಇಲ್ಲಿಗೆ ಬನ್ನಿ. ಎರಡನ್ನೂ ಏಕಕಾಲಕ್ಕೆ ಹೇಳಬೇಡಿ ಎಂದು ಸಲಹೆ ಕೊಟ್ಟರು.