
ಕೊಪ್ಪಳ : ಬೇವಿನಹಳ್ಳಿ ಗ್ರಾಮದಲ್ಲಿ ಚಿಕ್ಕೇನಕೊಪ್ಪದ ಚನ್ನವೀರ ಶರಣರ 30ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಐದು ಜೋಡಿಗಳ ಸಾಮೂಹಿಕ ಮದುವೆ, ಸ್ವಾಮೀಜಿಗಳ ನಾಣ್ಯ ತುಲಾಭಾರ, ಪ್ರವಚನ ಕಾರ್ಯಕ್ರಮ ನಡೆಯಿತು.

j3tvkannada
ಬಳಗಾನೂರು ಮಠದ ಭಕ್ತ ಬೇವಿನಹಳ್ಳಿ ಗ್ರಾಮದ ಬಸನಗೌಡ ಪಾಟೀಲ ಅವರ ವತಿಯಿಂದ ವಿವಿಧ ಸೇವೆ ನಡೆದವು. ಐದು ಜೋಡಿ ಬಡವರ ಸಾಮೂಹಿಕ ಮದುವೆ, ಬಳಗಾನೂರು ಮಠದ ಶಿವಶಾಂತವೀರ ಶರಣರ ಮತ್ತು ಹೆಬ್ಬಾಳ ಹಿರೇಮಠದ ನಾಗಭೂಷಣ ಶಿವಾಚಾರ್ಯರ ನಾಣ್ಯ ತುಲಾಭಾರ ನಡೆಯಿತು. ಗುರುವಂದನೆ ಕಾರ್ಯಕ್ರಮದಲ್ಲಿ ಗೀತಾ ಹನುಮಂತರಾವ್, ಕಮಲಾಬಾಯಿ, ಹೇಮಾವತಿ ಮರಡಿ, ದಾನಮ್ಮ ಸೋಮರೆಡ್ಡಿ, ಕೋಮಲ ಅಂಗಡಿ ಐವರು ನಿವೃತ್ತ ಹಿರಿಯ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕ ಬಸಯ್ಯಸ್ವಾಮಿ ಇಟಗಿಮಠ, ಉದ್ಯಮಿ ಎನ್.ಟಿ. ವೀರೇಶ್, ಕಾಶಯ್ಯಸ್ವಾಮಿ ಗವಿಮಠ, ಅಮರೇಗೌಡ ಪಾಟೀಲ್ ಸೇರಿದಂತೆ ನಾಲ್ವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳಗಾನೂರು ಮಠದ ಶಿವಶಾಂತವೀರ ಶರಣರು, ವ್ಯಕ್ತಿಯಲ್ಲಿ ಸಂಸ್ಕಾರಗುಣ, ಮಾನವೀಯ ಮೌಲ್ಯ ಬರಬೇಕಾದರೆ ಗುರು-ಹಿರಿಯರ ಮಾರ್ಗದರ್ಶನ ಅವಶ್ಯ. ಕಾಯಕ ಮಾಡಿ ದಾಸೋಹ ನೀಡುವ ಪರಂಪರೆ ಬಸವಾದಿ ಶರಣರ ಕೊಡುಗೆ. ತನ್ನ ದುಡಿಮೆಯಲ್ಲಿ ಕೆಲ ಅಂಶವನ್ನು ಉಳಿತಾಯ ಮಾಡಿ ಸಮಾಜಮುಖಿ ಕೆಲಸ ಮಾಡುತ್ತಿರುವ ಬಸನಗೌಡ ಪಾಟೀಲ್ ಅವರ ಸೇವೆ ಅನನ್ಯ. ಐದು ಜೋಡಿ ಮಧುಮಕ್ಕಳು ಬಡವರಲ್ಲ, ಬದಲಿಗೆ ಭಾಗ್ಯವಂತರು ಎಂದರು.
ರೈತ ಮತ್ತು ಶಿಕ್ಷಕ ಇಬ್ಬರೂ ಈ ದೇಶದ ಸಂಪತ್ತು. ಒಬ್ಬರು ಅನ್ನ, ಇನ್ನೊಬ್ಬರು ಜ್ಞಾನ ಸಂಪತ್ತು ಕೊಡುತ್ತಾರೆ. ಜ್ಞಾನವಿಲ್ಲದಿದ್ದರೆ ಸಂಪತ್ತು ವ್ಯರ್ಥ. ತುಲಾಭಾರದಿಂದ ಬಂದ ಹಣ ಹುಬ್ಬಳ್ಳಿಯ ಅಂಧ, ಅನಾಥ ಮಕ್ಕಳ ಆಶ್ರಮಕ್ಕೆ ಸಲ್ಲುತ್ತದೆ ಎಂದರು. ಹಡಗಲಿ ಗವಿಮಠ ಶಾಖಾಮಠದ ಹಿರಿಶಾಂತವೀರ ಸ್ವಾಮೀಜಿ, ಹೆಬ್ಬಾಳ ಹಿರೇಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿದರು. ನಾಗಯ್ಯ ಸ್ವಾಮಿಜಿ, ಅನುರಾಧೇಶ್ವರಿ ಸ್ವಾಮೀಜಿ ಹಾಜರಿದ್ದರು. ಗವಿಸಿದ್ದೇಶ್ವರ ಸಂಗೀತ ಪಾಠಶಾಲೆಯ ವೀರೇಶ್ ಹಿಟ್ನಾಳ್ ಮತ್ತು ತಂಡ, ಮಹಿಳಾ ಧ್ವನಿ ಸಂಸ್ಥೆ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜಾನಪದ ಗಾಯನ ನಡೆಯಿತು.