
ಕಲಬುರಗಿ: ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ತೀವ್ರವಾಗಲಿದ್ದು, ಬಿಸಿಲಿನ ಪ್ರತಾಪ 44 ಡಿಗ್ರಿ ಸೆಲ್ಸಿಯಸ್ ಸನಿಹಕ್ಕೆ ಬಂದಿದೆ. ನಗರದ ಪ್ರಮುಖ ಸಿಗ್ನಲ್ಗಳಲ್ಲಿ ಒಂದರಿಂದ ಒಂದೂವರೆ ನಿಮಿಷ ಕಾಯುವ ಸಮಯದಲ್ಲಿ ಸೂರ್ಯನ ಕಿರಣಗಳು ವಾಹನ ಸವಾರರನ್ನು ಹೈರಾಣುಗೊಳಿಸುತ್ತಿವೆ.

j3tvkannada
ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಮುಗಿಯುವವರೆಗೂ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವತಿಯಿಂದ ಸಿಗ್ನಲ್ಗಳಲ್ಲಿ ನೆರಳಿನ ಪರದೆಯನ್ನು ಅಳವಡಿಸುವ ವ್ಯವಸ್ಥೆ ಇದೆ. ಇದರಿಂದಾಗಿ ಸಿಗ್ನಲ್ಗಳಲ್ಲಿ ನಿಲ್ಲುವ ಪ್ರಯಾಣಿಕರು, ವಿಶೇಷವಾಗಿ ಬೈಕ್ ಸವಾರರು ಬಿಸಿಲಿನ ಝಳದಿಂದ ಕೆಲ ಕಾಲ ಮುಕ್ತಿ ಪಡೆಯುವುದು ಸಾಧ್ಯವಾಗಲಿದೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ಖರ್ಗೆ ಪೆಟ್ರೋಲ್ ಪಂಪ್, ರಾಮಮಂದಿರ ವೃತ್ತ ಹಾಗೂ ಹುಮನಾಬಾದ್ ರಿಂಗ್ ರೋಡ್ ಬಳಿ ಹೆಚ್ಚಿನ ದಟ್ಟಣಿ ಇರುತ್ತದೆ. ಹೀಗಾಗಿ, ಮಹಾನಗರ ಪಾಲಿಕೆಯು ಸಾರ್ವಜನಿಕರ ಹಿತದೃಷ್ಟಿಯಿಂದ ನೆರಳಿನ ಪರದೆಯ ವ್ಯವಸ್ಥೆಯನ್ನು ಮಾಡುವಂತೆ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ.
ವಿಜಯಪುರ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗುತ್ತದೆ. ಹಾಗಿದ್ದರೂ ತಮ್ಮ ನಾಗರಿಕರ ರಕ್ಷಣೆಗಾಗಿ ಅಲ್ಲಿನ ಸ್ಥಳೀಯ ಸಂಸ್ಥೆಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ. ಬಿಸಿಲಿಗೆ ಹೆಸರಾದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ಇಂತಹ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ. ಬಿಸಿಲಿನ ತಾಪದ ಕಾರಣಕ್ಕೆ ಸರ್ಕಾರಿ ಕಚೇರಿಗಳನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನೆರವಿಗೆ ಸರ್ಕಾರ ಧಾವಿಸಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಹೊರಗಡೆ ಬರುವವರಿಗೆ ಕನಿಷ್ಠ ಸಿಗ್ನಲ್ಗಳಲ್ಲಾದರೂ ನೆರಳಿನ ಪರದೆಯ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಕೊಂಚ ಅನುಕೂಲವಾಗುತ್ತದೆ