
ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದು, ಎಚ್.ಎನ್.ವ್ಯಾಲಿಯ ನೀರು ಕೆರೆಗಳಿಗೆ ಹರಿಸದೇ ಇರುವುದರಿಂದ ಕೆರೆ, ಕುಂಟೆಗಳಲ್ಲಿ ನೀರಿನ ಬರ ಆವರಿಸಿದೆ. ಇದರಿಂದ ಜನ, ಜಾನುವಾರು ಅಲ್ಲದೇ ವನ್ಯಪ್ರಾಣಿಗಳಿಗೆ ಮೇವು, ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಜನ, ಜಾನುವಾರು ಪರಿತಪಿಸುತ್ತಿವೆ. ಬಿಳ್ಳೂರಿನ ವಂಡಮಾನ್, ಪರಗೋಡು ಚಿತ್ರಾವತಿ, ಗಂಟಮಲ್ಲಮ್ಮ ಬ್ಯಾರೇಜುಗಳು ಸೇರಿದಂತೆ ತಾಲ್ಲೂಕಿನ ಕೆರೆ, ಕುಂಟೆ, ಕಾಲುವೆಗಳಲ್ಲಿ ನೀರು ಇಲ್ಲ.
ಸಾವಿರ ಅಡಿ ಕೊರೆಸಿದರೂ ನೀರು ದೊರೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ, ನೀರು ಸಿಗದೇ ರೈತರಿಗೆ ಸಂಕಷ್ಟ ಉಂಟಾಗಿದೆ. ತಾಲ್ಲೂಕಿನ ರೈತರು ಬೆಳೆದ ಕೃಷಿ, ತರಕಾರಿ ಬೆಳೆ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ಕೊಳವೆಬಾವಿ, ತೆರೆದಬಾವಿಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಹತ್ತರು ಎಕರೆ ಹೊಲ-ಗದ್ದೆ ಇದ್ದರೂ, ನೀರಿನ ಕೊರತೆಯಿಂದ ಬಂಜರು ಭೂಮಿಯಾಗಿದೆ. ತಾಲ್ಲೂಕಿನಲ್ಲಿ ರಾಗಿ, ಭತ್ತ, ನೆಲಗಡಲೆ, ಮುಸುಕಿನ ಜೋಳ, ಅವರೆ ಹೆಚ್ಚಾಗಿ ಬೆಳೆಯುತ್ತಾರೆ. ಟೊಮೆಟೊ, ಬೀನ್ಸ್, ಹೂಕೋಸು, ಗಡ್ಡೆಕೋಸು, ಮೂಲಂಗಿ, ಕ್ಯಾರೆಟ್, ಕೊತ್ತಂಬರಿ, ಪುದೀನಾ ಸೊಪ್ಪು ಬೆಳೆಯುತ್ತಾರೆ. ನೀರಿಲ್ಲದೆ ಕೆರೆ, ಕುಂಟೆ ಇದೀಗ ಆಟದ ಮೈದಾನವಾಗಿದೆ.

j3tvkannada
ತಾಲ್ಲೂಕಿನ ಗೂಳೂರು, ಮಿಟ್ಟೇಮರಿ, ಪಾತಪಾಳ್ಯ ಹೋಬಳಿಗಳ ಗ್ರಾಮಗಳಲ್ಲಿ ಹಾಗೂ ತಾಂಡಗಳಲ್ಲಿ ರೈತರು ಇದ್ದಾರೆ. ಬೆಳಗ್ಗೆ ಗ್ರಾಮ ತೊರೆದು, ಬಾಗೇಪಲ್ಲಿ ಪಟ್ಟಣದ ಹೊರವಲಯದ ಸಿಮೆಂಟ್, ಇಟ್ಟಿಗೆ, ಮರಕೆಲಸ, ಮನೆ ಕೆಲಸ, ತೋಟದ ಕೆಲಸಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಚೆಕ್ಪೋಸ್ಟ್, ಚಿಲಮತ್ತೂರು, ಹಿಂದೂಪೂರ, ಪುಟ್ಟಪರ್ತಿ, ಸೋಮಂದಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಆಂಧ್ರಸರ್ಕಾರ ಕೃಷ್ಣಾ ನದಿ ನೀರನ್ನು ಕಾಲುವೆಯ ಮೂಲಕ ಸರಬರಾಜು ಮಾಡಿದೆ. ಕೃಷ್ಣಾ ನದಿ ನೀರು ತಾಲ್ಲೂಕಿಗೆ ಪಾಲು ಇದೆ. ತಾಲ್ಲೂಕಿಗೆ 15 ಕಿಲೋಮೀಟರ್ ದೂರದಿಂದ ಕಾಲುವೆ ಮೂಲಕ ನೀರು ಹರಿಸಬಹುದು.
ಮಳೆ ಇಲ್ಲದೇ ಇರುವುದರಿಂದ ಕೊಳವೆಬಾವಿ, ತೆರೆದಬಾವಿಗಳಲ್ಲಿ ನೀರು ಇಲ್ಲ. ಕೃಷಿ, ತರಕಾರಿ ಬೆಳೆ ಬೆಳೆಯಲು ಆಗಿಲ್ಲ. ಕೃಷಿ ಕೆಲಸ ಬಿಟ್ಟು, ಕೂಲಿಕಾರ್ಮಿಕನಾಗಿ ದುಡಿಯುತ್ತಿದ್ದೇನೆ ಎಂದು ಪೋತೇಪಲ್ಲಿ ಗ್ರಾಮದ ರೈತ ಚೌಡಪ್ಪ ತಿಳಿಸಿದರು. ಎತ್ತಿನಹೊಳೆ ಯೋಜನೆ, ಕೃಷ್ಣಾ ನದಿ ನೀರಿನ ಪಾಲು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ ಆಗಿದೆ. ಕೂಡಲೇ ಸರ್ಕಾರ ಡಾ.ಪರಮಶಿವಯ್ಯ ವರದಿ ಜಾರಿ ಮಾಡಬೇಕು. ಕೃಷ್ಣಾ ನದಿಯ ಪಾಲು ತಾಲ್ಲೂಕಿಗೆ ನೀರು ಹರಿಸಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಸಹ ಸಂಚಾಲಕ ಡಿ.ಟಿ.ಮುನಿಸ್ವಾಮಿ ಒತ್ತಾಯಿಸಿದರು. ಒಂದು ತಿಂಗಳ ಒಳಗೆ ಎಚ್.ಎನ್.ವ್ಯಾಲಿಯ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಪ್ರಾಯೋಗಿಕವಾಗಿ ಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಾ.ಪರಮಶಿವಯ್ಯ ವರದಿ ಜಾರಿ ಮಾಡುವಂತೆ, ಕೃಷ್ಣಾ ನದಿಯ ನೀರಿನ ಪಾಲು ಹರಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿದರು.